ಬಾಗಲಕೋಟೆ : ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಗಿದ್ದ ಸಮಯದಲ್ಲಿ ವೀಣಾ ಕಾಶಪ್ಪನವರ, ಕಚೇರಿಗೆ ಮಾತ್ರ ಸಿಮೀತವಾಗದೆ, ಹೂರಗಡೆ ಸಂಚರಿಸಿ ಅಭಿವೃದ್ಧಿ ಪರ ಕಾರ್ಯಗಳಿಗೆ ಒತ್ತು ನೀಡಿದ್ದರು. ಅವರನ್ನೇ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಸೂಕ್ತವಾಗಿದೆ ಎಂದು ಪ್ರಚಾರ ಸಮಿತಿ ಮುಖಂಡ ಎಸ್. ಜಿ. ನಂಜಯ್ಯನಮಠ ತಿಳಿಸಿದರು.
ಈ ಬಾರಿ ಮೋದಿ ಅಲೆ ಬದಿಗಿರಿಸಿ ಕಾಂಗ್ರೆಸ್ ಪಕ್ಷದ ಅಲೆ ಸೃಷ್ಟಿಸುತ್ತಿರುವ ವೀಣಾ ಕಾಶಪ್ಪನವರ ಗೆಲುವು ನಿಶ್ಚಿತವೆಂದು ಮಾಜಿ ಶಾಸಕ ನಂಜಯ್ಯನಮಠ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ, ಸ್ವಚ್ಛತೆ ಮತ್ತು ಬಯಲು ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಿರುವ ವೀಣಾ ಕಾಶಪ್ಪನವರ, ಎಲ್ಲರೂಡನೆ ಬೆರೆತು, ಜಾತ್ಯತೀತ ಭಾವನೆಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಈ ಬಾರಿ ಅವರನ್ನೇ ಗೆಲ್ಲಿಸುತ್ತೇವೆ ಎಂದರು.
ಮಾಜಿ ಶಾಸಕರಾಗಿದ್ದ ವಿಜಯಾನಂದ ಕಾಶಪ್ಪನವರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ಹತಾಶರಾಗಿ ಮುಖಂಡರ ಬಗ್ಗೆ ಆರೋಪ ಮಾಡಿದ್ದರು. ಆದರೆ ಕ್ಷಮೆ ಯಾಚಿಸಿದ ಬಳಿಕ ಎಲ್ಲ ಅಸಮಾಧಾನ ದೂರಾಗಿದೆ ಎಂದು ನಂಜಯ್ಯನಮಠ ಸ್ಪಷ್ಟಪಡಿಸಿದರು.