ಬಾಗಲಕೋಟೆ: ಲಾಕ್ ಡೌನ್ ಬಳಿಕ ದೇವಾಲಯಗಳಲ್ಲಿ ಇಂದಿನಿಂದ ಪೂಜೆ ಪುನಸ್ಕಾರ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಧಾರ್ಮಿಕ ಕೇಂದ್ರ ಹಾಗೂ ಅಣ್ಣ ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮದಲ್ಲಿ ಇಂದಿನಿಂದ ಪೂಜೆ ಪುನಸ್ಕಾರ ಪ್ರಾರಂಭವಾಗಿದೆ.
ದೇವಾಲಯ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಮಾರ್ಕ ಮಾಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು, ಅವರ ಹೆಸರು ನಮೂದಿಸಿ, ಸ್ಯಾನಿಟೈಸರ್ ಅನ್ನು ಕೈಗೆ ಹಚ್ಚಿಕೊಂಡು ಸಂಗಮನಾಥನ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಒಳಗೆ ಹೋಗಿ ಸಂಗಮನಾಥನ ದರುಶನ ಪಡೆಯುತ್ತಿದ್ದಾರೆ.
ಆದರೆ ತೀರ್ಥ, ನೈವೇದ್ಯ, ಅಭಿಷೇಕ ಇಲ್ಲದ ಕೇವಲ ದರ್ಶನ ಪಡೆಯುವಂತೆ ಬರುವಂತೆ ಸೂಚಿಸಲಾಗಿದೆ. ಕಳೆದ ಎರಡು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಭಕ್ತರಿಗೆ ನಿಷೇಧ ಹೇರಲಾಗಿತ್ತು. ಕೊರೊನಾ ಭೀತಿಯಿಂದ ಸಾರ್ವಜನಿಕರು ಹಾಗೂ ಭಕ್ತರು ಇಲ್ಲದೆ, ಕೇವಲ ಅರ್ಚಕರು ಮಾತ್ರ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ಮುಗಿಸಿಕೊಂಡು ಹೋಗುತ್ತಿದ್ದರು. ಈಗ ಸ್ಥಳೀಯರು ಹಾಗೂ ಕೆಲ ಪ್ರದೇಶಗಳಿಂದ ಭಕ್ತರು ಆಗಮಿಸಿ, ಸಂಗಮನಾಥನ ದರ್ಶನ ಪಡಯುತ್ತಿದ್ದಾರೆ.