ಬಾಗಲಕೋಟೆ: ಇಲಕಲ್ಲ ಪಟ್ಟಣದಲ್ಲಿ, ಕನ್ನಡದ ಭಕ್ತ ಱಪ್ ಸಾಂಗ್ ಧ್ವನಿಸುರುಳಿ ಹಾಗು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಸಿದ್ದನಕೊಳ್ಳದ ಕಲಾ ಪೋಷಕ ಪೂಜ್ಯ ಡಾ: ಶಿವಕುಮಾರ ಸ್ವಾಮಿಗಳು ಸಮಾರಂಭಕ್ಕೆ ಚಾಲನೆ ನೀಡಿದರು.
ಇಲಕಲ್ಲ ನಗರದ ವಿಜಯಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಕನ್ನಡದ ಭಕ್ತ ಱಪ್ ಸಾಂಗ್ ಧ್ವನಿಸುರುಳಿ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಿದ್ದನಕೊಳ್ಳ ಮಠದ ಶ್ರೀಗಳು ಮಾತನಾಡಿ, ಇಲಕಲ್ಲ ನಗರದ ಈ ಪ್ರತಿಭೆ ಯಕ್ಷ ಎಂಬ ಬಾಲಕ ಸಂಗೀತದ ಬಗ್ಗೆ ಹೆಚ್ಚು ಉತ್ಸುಕನಾಗಿದ್ದಾನೆ. ನಮ್ಮ ಮಠದ ಭಕ್ತರಾಗಿರುವ ಹುಲ್ಲಪ್ಪ ಹಳ್ಳೂರ ಅವರ ಮಗ ಯಕ್ಷನನ್ನು ನಾಯಕ ನಟನನ್ನಾಗಿಸಿ ಕನ್ನಡದ ಭಕ್ತ ಎಂಬ ಹೆಸರಿನ ಚಿತ್ರ ತಗೆದು ಉತ್ತರ ಕನಾ೯ಟಕದ ಈ ಪ್ರತಿಭೆ ರಾಜ್ಯಾದ್ಯಂತ ಹೆಸರು ಗಳಿಸಲಿ ಎಂದು ಆಶೀರ್ವದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾಯ೯ ಬಸವರಾಜ ಗವಿಮಠ ಮಾತನಾಡಿ, ನಮ್ಮೂರಿನ ಈ ಪ್ರತಿಭೆ ಎತ್ತರಕ್ಕೆ ಬೆಳೆಯಲು ತಮ್ಮಿಂದ ಎಲ್ಲ ರೀತಿಯ ಸಹಾಯ, ಸಹಕಾರ ಸದಾ ಇರಲಿದೆ ಎಂದರು.
ಕಾರ್ಯಕ್ರಮದ ಕೇಂದ್ರ ಬಿಂದು ಬಾಲ ನಟ ಯಕ್ಷ ಮಾತನಾಡಿ, ತನ್ನ ಈ ಕನಸು ನನಸಾಗಲು ನಮ್ಮ ತಂದೆ ಹುಲ್ಲಪ್ಪ ಹಳ್ಳೂರ ಅವರ ಸಹಕಾರ ಮತ್ತು ಮಾರ್ಗದರ್ಶನ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವೇದಿಕೆಯ ಮೇಲೆ ತೃಪ್ತಿ ಶಿಕ್ಷಣ ಸಂಸ್ಥೆಯ ಕಾಯ೯ದಶಿ೯ ಪ್ರಭಾವತಿ ಹಳ್ಳೂರ, ತಾಲುಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸರಸ್ವತಿ ಈಟಿ, ಪ್ರವೀಣ್ ಹೂಲಗೇರಿ, ಎಂ.ಆರ್.ಪಾಟೀಲ್, ಮೌಲೇಶ ಬಂಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಬಾಗಲಕೋಟೆಯ ಜ್ಯೂ. ಯಶ್ ಮೆಲೊಡೀಸ್ ತಂಡದಿಂದ ನಡೆದ ರಸಮಂಜರಿ ಕಾಯ೯ಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.