ಬಾಗಲಕೋಟೆ: ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯ ಇಲಕಲ್ಲ ತಾಲೂಕಿನ ಸಿದ್ದನಕೊಳ್ಳ ಮಠಕ್ಕೆ ಪ್ರತಿ ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ಭಕ್ತರು ಬಂದು ಪೂಜೆ, ಪುರಸ್ಕಾರ ಮಾಡುತ್ತಾರೆ.
ಸಿದ್ದನಕೊಳ್ಳ ಮಠ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾಷ್ಟ್ರಕೂಟರು, ಚಾಲುಕ್ಯರ ಕಾಲದಿಂದಲೂ ಈ ಮಠ ಖ್ಯಾತಿ ಪಡೆದುಕೊಂಡಿದ್ದು, ಸಿದ್ದಿ ಪುರುಷರ ನೆಚ್ಚಿನ ತಾಣವಾಗಿದೆ. ಇಲ್ಲಿ ಸಪ್ತಮಾತೆಯರು, ಸಂಗಮನಾಥ ದೇವಾಲಯ ಜೊತೆಗೆ ಸಂತಾನ ಭಾಗ್ಯ ನೀಡುವ ಲಜ್ಜೆ ಗೌರಿ ದೇವಿಯ ಗುಡಿ ವಿಶೇಷವಾಗಿದೆ.
ಲಜ್ಜೆ ಗೌರಿಗೆ ಪ್ರತಿ ಅಮಾವಾಸ್ಯೆ ದಿನದಂದು ಪೂಜೆ, ಪುರಸ್ಕಾರ ಮಾಡಿ ಭಕ್ತಿಯಿಂದ ಬೇಡಿಕೊಂಡರೆ ಸಂತಾನ ಭಾಗ್ಯ ಇಲ್ಲದವರಿಗೆ ಮಕ್ಕಳ ಭಾಗ್ಯ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ. ಜೊತೆಗೆ ಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಯವರು ಮಕ್ಕಳಾಗುವುದಕ್ಕೆ ಆರ್ಯುವೇದ ಔಷಧ ಸಹ ನೀಡುತ್ತಾರೆ.
ಇನ್ನು ಇಲ್ಲಿನ ಲಜ್ಜೆ ಗೌರಿ ಇತಿಹಾಸ ಬಗ್ಗೆ ಯುನೋಸ್ಕದಲ್ಲಿ ದಾಖಲಾಗಿದೆ. ಈ ಹಿನ್ನೆಲೆ ವಿದೇಶಿಯರು ಇಲ್ಲಿಗೆ ಬಂದು ಲಜ್ಜೆ ಗೌರಿ ಬಗ್ಗೆ ಸಂಶೋಧನೆ ಮಾಡುತ್ತಾರೆ. ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಅಮಾವಾಸ್ಯೆಗೆ ಭಕ್ತರು ಆಗಮಿಸಿ, ಲಜ್ಜೆ ಗೌರಿ ದೇವಿಗೆ ಪೂಜೆ ಸಲ್ಲಿಸುವ ಜೊತೆಗೆ ಇಲ್ಲಿನ ಪವಾಡ ಪುರುಷ ಸಿದ್ದ ಶ್ರೀಗಳ ಗದ್ದುಗೆ ದರ್ಶನ ಮಾಡಿಕೊಂಡು ಹೋಗುತ್ತಾರೆ.
ಒಟ್ಟಿನಲ್ಲಿ ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಈ ಸಿದ್ದನಕೊಳ್ಳ ಮಠವು ನಿರಂತರ ದಾಸೋಹ ಮಠ ಎಂದೇ ಹೆಸರುವಾಸಿಯಾಗಿದೆ. ಇದರ ಜೊತೆಗೆ ಭಕ್ತರ ಇಷ್ಟಾರ್ಥ ಪೂರೈಸುವ ಧಾರ್ಮಿಕ ತಾಣವಾಗಿದ್ದು, ಕಲಾವಿದರಿಗೆ ಹಾಗೂ ಸಿನಿಮಾ ಚಿತ್ರೀಕರಣಕ್ಕೆ ನೆಚ್ಚಿನ ತಾಣವಾಗಿ ಗಮನ ಸೆಳೆಯುತ್ತಿದೆ.