ಬಾಗಲಕೋಟೆ: ನಾನು ವೈಯಕ್ತಿಕವಾಗಿ ನರೇಂದ್ರ ಮೋದಿ ವಿರೋಧಿ ಅಲ್ಲ. ಐದು ವರ್ಷ ಪ್ರಧಾನಿಯಾಗಿ ಏನು ಮಾಡಿದ್ದಾರೆ ಅಂತ ಹೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿ ಮೋದಿ ನೀಡಿದ್ದ ಭರವಸೆಗಳೇನು? ಪ್ರಗತಿ ಕಾರ್ಡ್ ಜನರ ಮುಂದೆ ಇಡಬೇಕು ಅಂತಾ ಒತ್ತಾಯಿಸಿದ್ರು. ಇದು ಪ್ರಜಾತಂತ್ರ ವ್ಯವಸ್ಥೆ, ಮೋದಿ ಭಾಷಣ ಮಾಡ್ತಿದ್ದಾರೆ. ಐದು ವರ್ಷ ಏನು ಮಾಡಿದ್ದೇನೆ ಅಂತ ಹೇಳ್ತಿಲ್ಲ. ನಮ್ಮ ಸರ್ಕಾರ ಚುನಾವಣೆಯಲ್ಲಿ ಸೋತಿರಬಹುದು. ಆದ್ರೆ, ಐದು ವರ್ಷ ಆಡಳಿತದಲ್ಲಿ ಜನರಿಗೆ ನೀಡಿದ್ದ 165 ಭರವಸೆ ಈಡೇರಿಸಿದ್ದೇನೆ. ಮೋದಿ ಆಡಳಿತದಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಭಾವನಾತ್ಮಕ ವಿಚಾರ ಹೇಳ್ತಿದ್ದಾರೆ ಅಂತಾ ಕಿಡಿಕಾರಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಬಿಜೆಪಿ ಅಲ್ಲ, ಅದು ಕಾಂಗ್ರೆಸ್. ಮೋದಿ ಅಧಿಕಾರದಲ್ಲಿ ನಿರುದ್ಯೋಗ ಹೋಯ್ತಾ? ದಲಿತರ ಸಮಸ್ಯೆ ಬಗೆಹರಿಸಿದ್ರಾ?. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 12 ಸರ್ಜಿಕಲ್ ಸ್ಟ್ರೈಕ್ ಆಗಿವೆ. ಪಾಕ್ ವಿರುದ್ಧ ಎರಡು ಸಲ ಯುದ್ಧ ಮಾಡಿ ಗೆದ್ದಿದ್ದೇವೆ. ಮೋದಿ ಅವರೇ 56 ಇಂಚು ಎದೆ ಇದ್ರೆ ಸಾಲದು. ಆ ಹೃದಯಲ್ಲಿ ಬಡವರ ಬಗ್ಗೆ ಕರುಣೆ ಇರಬೇಕು. ರೈತರ ಸಾಲ ಮನ್ನಾ ಮಾಡಲು ಮೋದಿಗೆ ಏನು ರೋಗ ಬಂದಿತ್ತು. ಅದಾನಿ ಅಂತವರಿಗೆ ಮಾತ್ರ ಮೋದಿ ಚೌಕಿದಾರ. ಬಡವರಿಗೆ ಚೌಕಿದಾರ ಆಗಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮತ್ತೆ ಸಿಎಂ ಆಗಬೇಕು ಅಂತ ಹಸಿರು ಟಾವಲ್ ಹಾಕ್ಕೊಂಡು ಹೊರಟಿದ್ದಾರೆ. ಬಾದಾಮಿ ಜನ ಮತ ಹಾಕಿದ್ದಕ್ಕೆ ಇವತ್ತು ನಾನು ಶಾಸಕ ಆಗಿದ್ದೇನೆ. ಗದ್ದಿಗೌಡರನ್ನು 15 ವರ್ಷ ಸಂಸದ ಮಾಡಿದ್ದೀರಿ. ಜನಪ್ರತಿನಿಧಿಯಾಗಿ ಅವರು ತಮ್ಮ ಕರ್ತವ್ಯ ಮಾಡಿದ್ದೇನು? ಯಾವ ಯೋಜನೆ ತಂದಿದ್ದಾರೆ? ಎಂದು ಪ್ರಶ್ನಿಸಿದರು. ನಾನು ಬಾದಾಮಿ ಶಾಸಕ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಈಶ್ವರಪ್ಪ ಬಾಗಲಕೋಟೆಗೆ ಉಸ್ತುವಾರಿ ಅಂತೆ. ಹಿಂದುಳಿದವರಿಗೆ ಒಂದು ಟಿಕೆಟ್ ಕೊಡಸಲು ಆಗಿಲ್ಲ. ಈಶ್ವರಪ್ಪ ಯಾಕೆ ಬಿಜೆಪಿಯಲ್ಲಿ ಇದ್ದೀಯಾ? 28 ಸ್ಥಾನಗಳಲ್ಲಿ ಹಿಂದುಳಿದವರಿಗೆ ಒಂದು ಸೀಟು ಕೊಟ್ಟಿಲ್ಲ. ಈ ಈಶ್ವರಪ್ಪಗೆ ನಾಚಿಕೆ ಆಗಲ್ವಾ? ಅಂತಾ ಕುಟುಕಿದ್ರು.