ಬಾಗಲಕೋಟೆ: ಕಿಲ್ಲಾ ಭಾಗದ ನಡುಗಡ್ಡೆ ಪ್ರದೇಶದ ಜನರ ಶಾಶ್ವತ ಸ್ಥಳಾಂತರಕ್ಕೆ ಬದ್ಧರಾಗಿರುವುದಾಗಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ.
ನಗರದ ಕಿಲ್ಲಾ ಗಲ್ಲಿಯಲ್ಲಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಹಾಗೂ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಕಿಲ್ಲಾದ ನಡುಗಡ್ಡೆ ಪ್ರದೇಶದಲ್ಲಿ ಈ ಮೊದಲು 850 ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿತ್ತು. ಆದರೆ ಈಗ 1100ಕ್ಕೂ ಹೆಚ್ಚು ಕುಟುಂಬಗಳು ಆಗಿದ್ದು, ಶಾಶ್ವತವಾಗಿ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಗಮನಕ್ಕೂ ಕೂಡ ತರಲಾಗಿದೆ ಎಂದರು.
ನಡುಗಡ್ಡೆ ಪ್ರದೇಶದ ಜನರಿಗೆ ಬಿಟಿಡಿಎ ವತಿಯಿಂದ ಸಿಗಬೇಕಾದ ಪರಿಹಾರ, ನಿವೇಶನ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ಕೊಟ್ಟ ಮಾತಿನಂತೆ ಕೆಲಸ ಮಾಡುತ್ತೇನೆ ಎಂದರು.
ಕೆಲವೊಂದು ಜನರು ಕಿಲ್ಲಾ ನಡುಗಡ್ಡೆ ಪ್ರದೇಶ ಸ್ಥಳಾಂತರ ಆಗುವುದಿಲ್ಲ ಎಂದು ಪ್ರತಿಭಟನೆ ಹಾಗೂ ಜನರಲ್ಲಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಅದಕ್ಕೆಲ್ಲಾ ಕಿವಿಗೊಡಬೇಡಿ. ಹಿಂದೆ ಮೈತ್ರಿ ಸರ್ಕಾರ, ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ನಡುಗಡ್ಡೆ ಪ್ರದೇಶ ಸ್ಥಳಾಂತರಕ್ಕೆ ಪ್ರತಿಭಟನೆಗಳು ನಡೆಯುತ್ತಿರಲಿಲ್ಲ. ಈಗ ಕೆಲವೊಂದು ಜನರು ನಡುಗಡ್ಡೆ ಪ್ರದೇಶದ ಜನರಿಗೆ ತಪ್ಪು ಸಂದೇಶ ನೀಡುವ ಸಲುವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಸಂತ್ರಸ್ತರ ಪರವಾಗಿ ಸದಾ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ ಎಂದರು.