ನವದೆಹಲಿ: ಬರ್ಮಿಂಗ್ಹ್ಯಾಮ್ನಲ್ಲಿ ಜುಲೈ 29 ರಂದು ಪ್ರಾರಂಭವಾಗಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ 18 ಸದಸ್ಯರ ಭಾರತ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ. ಮನ್ಪ್ರೀತ್ ಸಿಂಗ್ಗೆ ನಾಯಕತ್ವದ ಜವಾಬ್ದಾರಿ ನೀಡಿದ್ದು, ಹರ್ಮನ್ಪ್ರೀತ್ ಸಿಂಗ್ರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಅನುಭವಿ ಗೋಲ್ಕೀಪರ್ಗಳಾದ ಪಿ.ಆರ್. ಶ್ರೀಜೇಶ್ ಮತ್ತು ಕೃಷ್ಣನ್ ಪಾಠಕ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಕೃಷ್ಣನ್ ಪಾಠಕ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ.
ಡಿಫೆಂಡರ್ಗಳಾದ ವರುಣ್ ಕುಮಾರ್, ಸುರೇಂದರ್ ಕುಮಾರ್, ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್ ಮತ್ತು ಜರ್ಮನ್ಪ್ರೀತ್ ಸಿಂಗ್ ಅವರನ್ನೂ ಪರಿಗಣಿಸಲಾಗಿದೆ. ಮಿಡ್ಫೀಲ್ಡ್ನಲ್ಲಿ ಮನ್ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್ ಮತ್ತು ನೀಲಕಂಠ ಶರ್ಮಾ ಅವರ ಸೇವೆ ಇರಲಿದೆ. ಅನುಭವಿ ಸ್ಟ್ರೈಕರ್ಗಳಾದ ಮನ್ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ಅಭಿಷೇಕ್ ಚೆಂಡಿನೊಂದಿಗೆ ದಾಳಿ ನಡೆಸಲಿದ್ದಾರೆ.
ಕಳೆದ ವರ್ಷ ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾನ ಪಡೆದು ನಿರಾಸೆ ಅನುಭವಿಸಿತ್ತು. ಆದಾಗ್ಯೂ, ಈ ವರ್ಷ ಎಫ್ಐಎಚ್ ಪ್ರೊ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಬರ್ಮಿಂಗ್ಹ್ಯಾಮ್ನಲ್ಲಿ ಪ್ರಶಸ್ತಿ ಜಯಿಸುವ ಉತ್ಸಾಹದಲ್ಲಿದೆ. ಭಾರತ ತಂಡ ಇಂಗ್ಲೆಂಡ್, ಕೆನಡಾ, ವೇಲ್ಸ್ ಮತ್ತು ಘಾನಾ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜುಲೈ 31 ರಂದು ಘಾನಾ ವಿರುದ್ಧ ಕಣಕ್ಕಿಳಿಯುವಮೂಲಕ ಕಾಮನ್ವೆಲ್ತ್ನಲ್ಲಿ ಅಭಿಯಾನ ಆರಂಭಿಸಲಿದೆ.
ಪುರುಷರ ತಂಡ ಇಂತಿದೆ: ಮನ್ಪ್ರೀತ್ ಸಿಂಗ್ (ನಾಯಕ), ಹರ್ಮನ್ಪ್ರೀತ್ ಸಿಂಗ್ (ಉಪನಾಯಕ), ಶ್ರೀಜೇಶ್ ಪಿಆರ್ (ಗೋಲ್ ಕೀಪರ್), ಕೃಷ್ಣನ್ ಬಹದ್ದೂರ್ ಪಾಠಕ್ (ಗೋಲ್ ಕೀಪರ್), ವರುಣ್ ಕುಮಾರ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಜರ್ಮನ್ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್ , ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ಆಕಾಶದೀಪ್ ಸಿಂಗ್, ನೀಲಕಂಠ ಶರ್ಮಾ, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ಅಭಿಷೇಕ್.
ಇದನ್ನೂ ಓದಿ: ಟೆಸ್ಟ್ಗೆ 10 ದಿನ ಬಾಕಿ: ಇಂಗ್ಲೆಂಡ್ ನೆಲದಲ್ಲಿ ಅಭ್ಯಾಸ ಶುರು ಮಾಡಿದ ಭಾರತ ತಂಡ