ಇಸ್ಲಾಮಾಬಾದ್(ಪಾಕಿಸ್ತಾನ): ಕಳೆದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತಂಡಕ್ಕೆ ಮಾರಕವಾಗಿ ಕಾಡಿದ್ದ ಪಾಕಿಸ್ತಾನದ ವೇಗಿ ಶಾಹಿನ್ ಆಫ್ರಿದಿ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಾಕ್ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಗಾಯದಿಂದ ಬಳಲುತ್ತಿರುವ ಶಾಹಿನ್ ಆಫ್ರಿದಿಗೆ ಮುಂದಿನ 4-6 ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ, ಆಗಸ್ಟ್ 27ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ನಲ್ಲಿ ಅವರು ಭಾಗಿಯಾಗುತ್ತಿಲ್ಲ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಶಾಹೀನ್ ಅಫ್ರಿದಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳನ್ನ ಪೆವಿಲಿಯನ್ಗೆ ಅಟ್ಟಿದ್ದರು. ಆರಂಭಿಕರಾದ ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇವರ ಬೌಲಿಂಗ್ ಬಲೆಗೆ ಬಿದ್ದಿದ್ದರು. ಜೊತೆಗೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಶಾಹಿನ್ ಆಫ್ರಿದಿ ಪಾಕ್ ತಂಡದ ಪ್ಲಸ್ ಪಾಯಿಂಟ್ ಆಗಿದ್ದರು. ಇದೇ ಖುಷಿಯಲ್ಲಿ ಭಾರತದ ವಿರುದ್ಧ ಸುಲಭ ಗೆಲುವು ದಾಖಲು ಮಾಡಬಹುದು ಎಂಬ ಕನಸು ಕಾಣುತ್ತಿತ್ತು. ಆದರೆ, ಅವರು ಫಿಟ್ ಆಗಿಲ್ಲ ಎಂಬ ಸುದ್ದಿ, ತಂಡ ದೊಡ್ಡ ಮಟ್ಟದ ಹಿನ್ನಡೆ ಎದುರಿಸುವಂತೆ ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ನೆದರ್ಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶಾಹಿನ್ ಆಫ್ರಿದಿ ಅವಕಾಶ ಪಡೆದುಕೊಂಡಿದ್ದರು. ಆದರೆ, ಗಾಯದಿಂದಾಗಿ ಅವರು ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಏಷ್ಯಾಕಪ್ನಿಂದ ಅವರು ಹೊರಬಿದ್ದಿದ್ದು, ಮುಂದಿನ 2-3 ದಿನದಲ್ಲಿ ಪಾಕ್ ಬೋರ್ಡ್ ಬದಲಿ ಆಟಗಾರನ ಘೋಷಣೆ ಮಾಡಲಿದೆ.
ಆಗಸ್ಟ್ 28ರಂದು ಮೆಗಾ ಫೈಟ್: ಶ್ರೀಲಂಕಾ ಬದಲಿಗೆ ಯುಎಇನಲ್ಲಿ ಆಯೋಜನೆಗೊಂಡಿರುವ ಏಷ್ಯಾಕಪ್ ಆಗಸ್ಟ್ 27ರಿಂದ ಆರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಆಗಿರುವ ಭಾರತ-ಪಾಕಿಸ್ತಾನ ಆಗಸ್ಟ್ 28ರಂದು ಮುಖಾಮುಖಿಯಾಗಲಿವೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ಫೈಟ್: ಈ ತಂಡ ಗೆಲ್ಲಲಿದೆ ಎಂದ ಪಾಂಟಿಂಗ್
ಪಾಕಿಸ್ತಾನ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್
ಏಷ್ಯಾ ಕಪ್ 2022ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್
ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 7 ಹಾಗೂ ಪಾಕಿಸ್ತಾನ 5 ಪಂದ್ಯಗಳಲ್ಲಿ ಗೆದ್ದಿದೆ. ಇಲ್ಲಿ ಭಾರತ ಹೆಚ್ಚಿನ ಲಾಭ ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಟೀಂ ಇಂಡಿಯಾ ಆಡಿರುವ 21 ಟಿ20 ಪಂದ್ಯಗಳ ಪೈಕಿ 17ರಲ್ಲಿ ಗೆಲುವು ದಾಖಲು ಮಾಡಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ,ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಸೇರಿದಂತೆ ಆರು ತಂಡಗಳು ಮುಖಾಮುಖಿಯಾಗಲಿವೆ. ಈ ಹಿಂದಿನ ಏಷ್ಯಾಕಪ್ನಲ್ಲಿ ಭಾರತ-ಬಾಂಗ್ಲಾದೇಶ ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೊನೆ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ದಿನೇಶ್ ಕಾರ್ತಿಕ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.