ನವದೆಹಲಿ: ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಎರಡನೇ ಟೆಸ್ಟ್ಗೆ ಭಾರತ ತಂಡಕ್ಕೆ ಇನ್ನೊಂದು ಬಲ ಸೇರ್ಪಡೆಯಾಗಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಕಮ್ ಬ್ಯಾಕ್ ಮಾಡಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಟೆಸ್ಟ್ ಸ್ಕ್ವಾಡ್ ನವೀಕರಿಸಲಾಗಿದ್ದು ಅಯ್ಯರ್ ಹೊಸ ಸೇರ್ಪಡೆಯಾಗಿದ್ದಾರೆ.
ಶ್ರೇಯನ್ ಅಯ್ಯರ್ ತಂಡಕ್ಕೆ ಸೇರಿರುವ ಬಗ್ಗೆ ಬಿಸಿಸಿಐ ಟ್ವಿಟ್ ಮಾಡಿ ತಿಳಿಸಿದೆ. ಅಯ್ಯರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಪುನರ್ವಸತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದ ಅನುಮತಿ ಪಡೆದ ನಂತರ ತಂಡಕ್ಕೆ ಸೇರ್ಪಡೆ ಮಾಡಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ಗೆ ಮುನ್ನ ಶ್ರೇಯಸ್ ನವದೆಹಲಿಗೆ ಪ್ರಯಾಣ ಬೆಳಸಲಿದ್ದು ತಂಡ ಸೇರಿಕೊಳ್ಳಲಿದ್ದಾರೆ.
ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ 2 ಟೆಸ್ಟ್ ಸರಣಿಗಳನ್ನು ಆಡಿದ ನಂತರ ಶ್ರೇಯಸ್ ಅಯ್ಯರ್ ಬೆನ್ನಿನ ಕೆಳಭಾಗದಲ್ಲಿ ಊತದಿಂದಾಗಿ ಆಟದಿಂದ ಹೊರಗುಳಿದರು. ಬೆಂಗಳೂರಿನ ಪುನರ್ವಸತಿ ಅವರನ್ನು ಕಳಿಸಿ ಕೊಡಲಾಗಿತ್ತು ಮತ್ತು ಅವರಿಗೆ ಚಿಕಿತ್ಸೆಯನ್ನು ನೀಡಲಾಗಿತ್ತು. ನೋವಿನ ಕಾರಣ ಅಯ್ಯರ್ ಇತ್ತೀಚೆಗೆ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಶ್ರೇಯಸ್ ಅಯ್ಯರ್ ಬದಲಿಗೆ ರಜತ್ ಪಾಟಿದಾರ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು.
ಇತ್ತೀಚೆಗೆ ಶ್ರೇಯಸ್ ಅಯ್ಯರ್ ಮತ್ತು ಶಿಖರ್ ಧವನ್ ಅವರ ಡ್ಯಾನ್ಸ್ ವಿಡಿಯೋ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎಸ್ಸಿಎ) ನಿಂದ ಹೊರಬಂದಿತ್ತು. ವಿಡಿಯೋದಲ್ಲಿ, ಶ್ರೇಯಸ್ ಅಯ್ಯರ್ ನೃತ್ಯ ಮಾಡುವಾಗ ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ಅವರು ಎನ್ಸಿಎಯಿಂದ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯಲು ಕಾಯುತ್ತಿದ್ದರು. ಫಿಟ್ನೆಸ್ ಸಾಬೀತಾದರೆ ಫೆಬ್ರವರಿ 17 ರಿಂದ ದೆಹಲಿಯಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ಗೆ ಶ್ರೇಯಸ್ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿತ್ತು. ಅದರಂತೆ ಪಿಟ್ನೆಸ್ ಸಾಬೀತು ಪಡಿಸಿ ಟೆಸ್ಟ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಎರಡನೇ ಟೆಸ್ಟ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್.
ಉನಾದ್ಕತ್ಗೆ ಬಿಡುಗಡೆ: ವೇಗಿ ಜಯದೇವ್ ಉನಾದ್ಕಟ್ರನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಸೌರಾಷ್ಟ್ರ ತಂಡ ರಣಜಿ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದ ಹಿನ್ನೆಲೆ ಅವರನ್ನು ಕಳಿಸಿಕೊಟ್ಟಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚಿನ ಅವಕಾಶ ಕೊಟ್ಟಿದ್ದರಿಂದ ಉನಾದ್ಕಟ್ಗೆ ಅವಕಾಶ ಸಿಕ್ಕಿರಲಿಲ್ಲ. ಮೂವರು ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಅವರಿಗೆ ಸ್ಥಾನ ಸಿಕ್ಕಿತ್ತು. ವೇಗದ ವಿಭಾಗದಲ್ಲಿ ಶಮಿ ಮತ್ತು ಸಿರಾಜ್ ಸ್ಥಾನಗಳಿಸಿದ್ದರು.
ಮೊದಲ ಪಂದ್ಯ ವಿದರ್ಭ ಕ್ರೀಡಾಂಗಣದಲ್ಲಿ ನಡೆದಿದ್ದು, ಭಾರತ ಇನ್ನಿಂಗ್ಸ್ ಮತ್ತು 132 ರನ್ಗಳಿಂದ ಗೆಲುವು ಸಾಧಿಸಿತ್ತು. ಅಶ್ವಿನ್ ಮತ್ತು ರವೀಂದ್ರ ಜಡೇjಆ ಅವರ ಬೌಲಿಂಗ್ಗೆ ನಲುಗಿದ ಆಸ್ಟ್ರೇಲಿಯಾ ಮೂರನೇ ದಿನಕ್ಕೆ ಸೋಲನುಭವಿಸಿತ್ತು.
ಇದನ್ನೂ ಓದಿ: ಸ್ಮಿತ್ ಬಗೆಗಿನ ಬಾರ್ಡರ್ ಟೀಕೆಗೆ ಕ್ಯಾರಿ ಪ್ರತಿಕ್ರಿಯೆ: "ದೆಹಲಿಯಲ್ಲಿ ಪುಟಿದೇಳುತ್ತೇವೆ"