ಮುಂಬೈ: ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪೃಥ್ವಿ ಶಾ, ತಾವು ಭಾರತ ತಂಡದಲ್ಲಿ ಅವಕಾಶ ಪಡೆಯುವ ಬಗ್ಗೆ ಯೋಚಿಸಲು ಬಯಸುವುದಿಲ್ಲ. ಬದಲಾಗಿ ನನ್ನಲ್ಲಿರುವ ಬ್ಯಾಟಿಂಗ್ ತಂತ್ರಗಳ ಲೋಪವನ್ನು ಸುಧಾರಿಸಿಕೊಳ್ಳುವತ್ತ ಸಂಪೂರ್ಣ ಗಮನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಶನಿವಾರ ಸಿಎಸ್ಕೆ ನೀಡಿದ 189 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಇನ್ನೂ 8 ಎಸೆತಗಳಿರುವಂತೆ ಜಯ ಸಾಧಿಸಿತ್ತು. ಪೃಥ್ವಿ ಶಾ 38 ಎಸೆತಗಳಲ್ಲಿ 72 ರನ್ ಗಳಿಸಿದರು. ಅಲ್ಲದೆ ಧವನ್(84) ಜೊತೆ ಸೇರಿ ಆರಂಭಿಕ ಜೊತೆಯಾಟದಲ್ಲಿ 138 ರನ್ ಗಳಿಸಿದರು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ವೈಫಲ್ಯ ಅನುಭವಿಸಿ ತಂಡದಿಂದ ಹೊರಬಿದ್ದ ಮೇಲೆ ತಮ್ಮ ಬ್ಯಾಟಿಂಗ್ನಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡಿರುವ ಪೃಥ್ವಿ ಶಾ, ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ 827 ರನ್ ಗಳಿಸಿ ಮುಂಬೈ ತಂಡ ಚಾಂಪಿಯನ್ ಆಗಲು ನೆರವಾಗಿದ್ದರು.
"ಆಸ್ಟ್ರೇಲಿಯಾದಲ್ಲಿ ನನ್ನನ್ನು ಕೈಬಿಟ್ಟ ನಂತರ ನಾನು ನನ್ನ ಬ್ಯಾಕ್ ಮತ್ತು ಮೂವ್ಮೆಂಟ್ಗಳ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಆಸ್ಟ್ರೇಲಿಯಾದಲ್ಲಿದ್ದಾಗಲೇ ನಾನು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ. ಪ್ರವೀಣ್ [ಅಮ್ರೆ] ಸರ್ ಅವರೊಂದಿಗೆ ತಂತ್ರಗಾರಿಕೆ ಕಡೆ ಗಮನಹರಿಸಿದ್ದೆ. ಅದು ವಿಜಯ್ ಹಜಾರೆ ಟ್ರೋಫಿ ವೇಳೆ ಉತ್ತಮವಾಗಿ ನೆರವಾಯಿತು ಎಂದು ನಾನು ಭಾವಿಸುತ್ತೇನೆ" ಎಂದು ಪೃಥ್ವಿ ಶಾ ಪಂದ್ಯದ ನಂತರ ನಡೆದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ವಿಚಾರವಾಗಿ ಮಾತನಾಡಿ, ಭಾರತ ತಂಡದಲ್ಲಿ ಅವಕಾಶ ಪಡೆಯುವ ಬಗ್ಗೆ ನಾನು ಯೋಚಿಸುವುದಿಲ್ಲ. ಏಕೆಂದರೆ ತಂಡದಿಂದ ಹೊರಬಿದ್ದದ್ದು ನನಗೆ ತುಂಬಾ ನಿರಾಶೆ ತಂದಿತ್ತು. ನಾನು ಅದರಿಂದ ಮುಂದುವರೆಯಬೇಕಿದೆ. ಬ್ಯಾಟಿಂಗ್ ಮತ್ತು ತಂತ್ರಗಾರಿಕೆಯ ವಿಚಾರದಲ್ಲಿ ನನ್ನಲ್ಲಿರುವ ತಪ್ಪುಗಳನ್ನು ಸುಧಾರಿಸಿಕೊಳ್ಳಬೇಕಿದೆ. ಅದಕ್ಕಾಗಿ ಕಠಿಣವಾಗಿ ಶ್ರಮಿಸುತ್ತೇನೆ. ಇದರಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ ಎಂದು ಶಾ ಹೇಳಿದ್ದಾರೆ.
ಇದನ್ನು ಓದಿ: ನಾಯಕನಾಗಿ ಸಾಧಿಸಿದ ಮೊದಲ ಗೆಲುವಿನ ಶ್ರೇಯವನ್ನು ಧೋನಿಗೆ ಅರ್ಪಿಸಿದ ರಿಷಭ್ ಪಂತ್