ನವದೆಹಲಿ: ಟೀಂ ಇಂಡಿಯಾ ವಿಶ್ವಕಪ್ ತಂಡಕ್ಕೆ ವಿವಾದದಿಂದಲೇ ಆಯ್ಕೆಯಾಗಿದ್ದ ವಿಜಯ್ ಶಂಕರ್, ನಂತರ ಕಳಪೆ ಪ್ರದರ್ಶನದಿಂದ ಚರ್ಚೆಗೆ ಗ್ರಾಸವಾಗಿದ್ದರು. ಈಗ ವಿಜಯ್ ಶಂಕರ್ ಗಾಯದ ಸಮಸ್ಯೆಯಿಂದ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದು, ಟೀಂ ಇಂಡಿಯಾಗೆ ಬ್ಯಾಟಿಂಗ್ನಲ್ಲಿ ಮತ್ತಷ್ಟು ಬಲ ಬಂದಂತಾಗಿದೆ.
ಈ ಹಿಂದೆ ಅಭ್ಯಾಸ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ವಿಜಯ್ ಶಂಕರ್ ಗಾಯ ಮಾಡಿಕೊಂಡಿದ್ದರು. ಇದೀಗ ಮತ್ತೆ ಪ್ರಾಕ್ಟಿಸ್ ಮಾಡುವಾಗ ಬುಮ್ರಾ ಎಸೆತದಲ್ಲಿ ಎಡಗಾಲಿನ ಬೆರಳಿಗೆ ಗಾಯ ಮಾಡಿಕೊಂಡಿದ್ದರಿಂದ ವಿಜಯ್ ಶಂಕರ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಜಯ್ ಶಂಕರ್ ಬದಲಿಗೆ ರಿಷಭ್ ಪಂತ್ ರನ್ನು ಆಡಿಸಲಾಗಿತ್ತು. ಆದರೆ, ಗಾಯದಿಂದ ಓಪನರ್ ಶಿಖರ್ ಧವನ್ ತಂಡದಿಂದ ಹೊರ ಹೋದಾಗಿನಿಂದ ತಂಡದಲ್ಲಿ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತಿದ್ದು, ಅದಕ್ಕಾಗಿ ಮಯಾಂಕ್ ಅಗರವಾಲ್ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮಾಯಾಂಕ್ ಅಗರವಾಲ್ 2018ರ ಡಿಸೆಂಬರ್ 26 ರಂದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ ತಂಡವನ್ನು ಸೇರಿಕೊಂಡಿದ್ದರು. ಇಲ್ಲಿಯ ತನಕ ಭಾರತ ತಂಡದ ಪರ ಎರಡು ಟೆಸ್ಟ್ಗಳನ್ನು ಆಡಿರುವ ಮಯಾಂಕ್, 65.00 ಸರಾಸರಿಯಲ್ಲಿ 195 ರನ್ ಗಳಿಸಿದ್ದಾರೆ. 77 ಇವರ ಗರಿಷ್ಠ ರನ್. 75 ಲಿಸ್ಟ್ 'ಎ' ಪಂದ್ಯ ಆಡಿರುವ ಮಯಾಂಕ್ 48.71ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 3605 ರನ್ ಬಾರಿಸಿದ್ದಾರೆ. ಇದರಲ್ಲಿ ಇವರ ಗರಿಷ್ಠ ರನ್ 176.
ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಗಾಗಿ, ಗಾಯಗೊಂಡ ಓಪನರ್ ಪೃಥ್ವಿ ಶಾ ಅವರ ಬದಲಿಯಾಗಿ ಅಗರ್ವಾಲ್ ಅವರನ್ನು ಕರೆಸಲಾಯಿತು. ಆರಂಭಿಕರಾದ ಕೆ.ಎಲ್. ರಾಹುಲ್ (ಐದು ಇನ್ನಿಂಗ್ಸ್ಗಳಿಂದ 11.40 ರ ಸರಾಸರಿಯಲ್ಲಿ 57 ರನ್) ಮತ್ತು ಮುರಳಿ ವಿಜಯ್ ಕೂಡಾ ನೀರಸ ಪ್ರದರ್ಶನ ತೋರಿದ್ದರು. ಅಡಿಲೇಡ್ ಮತ್ತು ಪರ್ತ್ನಲ್ಲಿ ಸೋತ ನಂತರ, ಅಗರ್ವಾಲ್ ಮೆಲ್ಬೋರ್ನ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದ್ದರು. ನಂತರ ಮೂರು ಇನ್ನಿಂಗ್ಸ್ಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸುವ ಮೂಲಕ ಮಯಾಂಕ್ ಅದ್ಬುತ ಆಟವಾಡಿದ್ದರು. ಭಾರತ ಈ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು.
ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ನಡೆದಿದ್ದ ಭಾರತ ಎ, ವೆಸ್ಟ್ ಇಂಡೀಸ್ ಎ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಆಡಿದ್ದರು. ಭಾರತ ಎ ತಂಡ ಆ ಸರಣಿಯಲ್ಲಿ ಗೆದ್ದಿತ್ತು. ಮಯಾಂಕ್ ಆ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಅಂದಿನ ಆ ಸಾಧನೆ ಇಂದು ಮಯಾಂಕ್ ಆಯ್ಕೆಗೆ ಕಾರಣವಾಗಿದೆ.
ಧವನ್ ಬದಲಿಗೆ ಓಪನರ್ ಆಗಿ ಕಣಕ್ಕಿಳಿದಿದ್ದ ಕನ್ನಡಿಗ ರಾಹುಲ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ, ಆದ ಕಾರಣ ಇಂದಿನ ಪಂದ್ಯದಲ್ಲಿ ಓಪನರ್ ಆಗಿ ಮಯಾಂಕ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ರಾಹುಲ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸುವ ಸಾಧ್ಯತೆ ಇದೆ. ಆದರೆ, ರಿಷಭ್ ಪಂತ್ ಯಾವ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಾರೆ ಎನ್ನುವುದು ಕೂತೂಹಲ ಮೂಡಿಸಿದೆ.
ಇನ್ನು ಟೀಂ ಇಂಡಿಯಾದ ಆಲ್ ರೌಂಡರ್ ಕೇದಾರ್ ಜಾಧವ್, ವಿಶ್ವಕಪ್ ನೀರಸ ಪ್ರದರ್ಶನ ನೀಡುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇಂದಿನ ಪಂದ್ಯದಲ್ಲಿ ಅವರ ಬದಲಿಗೆ ರವಿಂದ್ರ ಜಡೇಜಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಜಡೇಜಾ ಉತ್ತಮ ಆಲ್ ರೌಂಡರ್ ಆಗಿದ್ದು, ಕ್ಷೇತ್ರ ರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಟೀಮ್ ಇಂಡಿಯಾಗೆ ಆಫ್ ಸ್ಪಿನ್ನರ್ ಸಮಸ್ಯೆಯೂ ಎದ್ದು ಕಾಣುತ್ತಿದ್ದು, ಅದಕ್ಕಾಗಿಯೇ ಇಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗಲ್ಲಿ ಚಾನ್ಸ್ ಸಿಗುವ ನಿರೀಕ್ಷೆ ಇದೆ ಎನ್ನಲಾಗ್ತಿದೆ.