ದಿಂಡಿಗಲ್(ತಮಿಳುನಾಡು): ಸಯ್ಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿ ನಂತರ ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡ ತಮಿಳುನಾಡಿನ ಮೇಲೆ ಮತ್ತೆ ಪ್ರಾಬಲ್ಯ ಸಾಧಿಸಿ ಇನ್ನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 336 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ್ದ ತಮಿಳುನಾಡು ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತ್ತು. ಮೂರನೇ ದಿನವಾದ ಇಂದು ಎಲ್ಲ ವಿಕೆಟ್ಗಳನ್ನು ಕಳೆದುಕೊಂಡು 307 ರನ್ ಗಳಿಸಲಷ್ಟೇ ಶಕ್ತವಾಯಿತು. ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 336 ರನ್ ಗಳಿಸಿತ್ತು. ಜೊತೆಗೆ 29 ರನ್ಗಳ ಹಿನ್ನಡೆ ಅನುಭವಿಸಿತು.
ತಮಿಳುನಾಡು ಪರ ದಿನೇಶ್ ಕಾರ್ತಿಕ್ 235 ಎಸೆತಗಳನ್ನೆದುರಿಸಿ 113 ರನ್ ಗಳಿಸೋ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಇವರನ್ನು ಬಿಟ್ಟರೆ ಮುಕುಂದ್ 47, ಮುರಳಿ ವಿಜಯ್ 32, ಬಾಬಾ ಅಪರಾಜಿತ್ 37 ರನ್ ಗಳಿಸಿದರು.
ಕರ್ನಾಟಕ ಪರ ರೋನಿತ್ ಮೋರೆ 2, ಕೃಷ್ಣಪ್ಪ ಗೌತಮ್ 6 ವಿಕೆಟ್, ವಿ. ಕೌಶಿಕ್, ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.
29 ರನ್ಗಳ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್ 8 ರನ್ಗಳಿಸಿ ರನ್ ಔಟ್ ಆದರೆ, ದೇಗಾ ನಿಶ್ಚಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ.
ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ 8 ರನ್ ಹಾಗೂ ಕರುಣ್ ನಾಯರ್ ಕ್ರೀಸ್ನಲ್ಲಿದ್ದಾರೆ. ಕರ್ನಾಟಕ ತಂಡ 47 ರನ್ಗಳ ಮುನ್ನಡೆ ಸಾಧಿಸಿದೆ.