ನವದೆಹಲಿ: ಕೊರೊನಾ ವೈರಸ್ ಹಾವಳಿ ಕ್ರೀಡಾ ಲೋಕಕ್ಕೂ ಬಿಸಿ ತಟ್ಟಿದ್ದು, ಕ್ರಿಕೆಟ್ ಕೂಡ ಹೊರತಾಗಿಲ್ಲ. ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ಸಂಬಂಧಿಸಿದಂತೆ ಪರಿಹಾರ ಸೂತ್ರವೊಂದನ್ನ ಮುಂದಿಟ್ಟಿದ್ದಾರೆ.
"ಈ ಸಮಯದಲ್ಲಿ, ನಮಗೆಲ್ಲರಿಗೂ ತಿಳಿದಿರುವಂತೆ, ಸೆಪ್ಟೆಂಬರ್ 30 ರವರೆಗೆ ಆಸ್ಟ್ರೇಲಿಯಾವು ವಿದೇಶಿಯರನ್ನು ತನ್ನ ದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಟಿ-20 ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್3 ನೇ ವಾರದಿಂದ ಪ್ರಾರಂಭವಾಗುತ್ತಿದೆ, ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ಕಷ್ಟವಾಗುತ್ತದೆ" ಎಂದು ಹೇಳಿದರು.
2020 ರಲ್ಲಿ ಭಾರತ ಟಿ-20 ವಿಶ್ವಕಪ್ಗೆ ಆತಿಥ್ಯ ವಹಿಸಬಹುದಾಗಿದ್ದರೆ, ಮುಂದಿನ ಆವೃತ್ತಿಯನ್ನು ಆಸ್ಟ್ರೇಲಿಯಾ ಆಯೋಜಿಸಬಹುದೆಂದು ಭಾರತದ ಆರಂಭಿಕ ಆಟಗಾರ ಸೂಚಿಸಿದ್ದಾರೆ. ಏಕೆಂದರೆ ಭಾರತದಲ್ಲಿ ಕೊರೊನಾ ವೈರಸ್ ಪ್ರಮಾಣ ಬೇರೆ ದೇಶಗಳಿಗೆ ಹೋಲಿಸಿದರೆ ಸ್ವಲ್ವ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.
ಇದು ಎರಡು ದೇಶಗಳ ಒಪ್ಪಂದದ ಪ್ರಕಾರ ಸಾಧ್ಯವಾದರೆ ಈ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.