ನವದೆಹಲಿ : ವಿಶ್ವಚಾಂಪಿಯನ್ ಹಾಗೂ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತೆ ಪಿ ವಿ ಸಿಂಧು ಮುಂಬರುವ ಥಾಮಸ್ ಉಬರ್ ಕಪ್ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹಿಮಂತ್ ಬಿಸ್ವ ಶರ್ಮಾ ಖಚಿತಪಡಿಸಿದ್ದಾರೆ.
ಇದಕ್ಕೂ ಮೊದಲು ವೈಯಕ್ತಿಕ ಕಾರಣಗಳಿಂದ ಸಿಂಧು ಟೂರ್ನಿಯಿಂದ ಹೊರ ಹೋಗಲು ನಿರ್ಧರಿಸಿದ್ದರು. ಆದರೆ, ಶರ್ಮಾರ ಮನವಿ ಮೇರೆಗೆ ಥಾಮಸ್ ಉಬರ್ ಕಪ್ನ ಭಾಗವಾಗಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಾನು ಪಿವಿ ಸಿಂಧು ಅವರನ್ನು ಭಾರತ ತಂಡಕ್ಕೆ ಸೇರಿಕೊಳ್ಳಲು ಮನವಿ ಮಾಡಿದ್ದೇನೆ. ಥಾಮಸ್ ಉಬರ್ ಕಪ್ನಲ್ಲಿ ಪದಕ ಗೆಲ್ಲಲು ಉತ್ತಮ ಅವಕಾಶವಿದೆ. ನನ್ನ ಮನವಿಗೆ ಸಿಂಧು ಒಪ್ಪಿಕೊಂಡಿದ್ದು, ಅವರ ಕುಟುಂಬದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಅವರು ಭಾರತ ತಂಡದ ಭಾಗವಾಗಲಿದ್ದು, ದೇಶಕ್ಕಾಗಿ ಆಡಲಿದ್ದಾರೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
2020ರ ಥಾಮಸ್ ಮತ್ತು ಉಬರ್ ಕಪ್ ಅಕ್ಟೋಬರ್ 3ರಿಂದ 11ರವರೆಗೆ ಡೆನ್ಮಾರ್ಕ್ನ ಆರ್ಹುಸ್ನಲ್ಲಿ ನಡೆಯಲಿದೆ. ಪಿವಿ ಸಿಂಧು ಈಗಾಗಲೇ ತಮ್ಮ ಇತರೆ 8 ಜನ ಒಲಿಂಪಿಕ್ ಸ್ಪರ್ಧಿಗಳ ಜೊತೆ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಯಾಂಪ್ನಲ್ಲಿ ತರಬೇತಿ ಶುರು ಮಾಡಿದ್ದಾರೆ.