ಡಾ. ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ಈ ವಾರ ಕೂಡಾ ಮೊದಲ ಸ್ಥಾನವನ್ನು ಕಾಯ್ಡುಕೊಂಡು ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.
ಈ ಧಾರಾವಾಹಿ ಕೇವಲ ಮಹಿಳೆಯರನ್ನು ಮಾತ್ರವಲ್ಲ, ಯುವಕ, ಯುವತಿಯರು, ವೃದ್ಧರನ್ನೂ ತನ್ನತ್ತ ಸೆಳೆದಿದೆ. ಧಾರಾವಾಹಿ ಆರಂಭದ ದಿನದಿಂದ ಹಿಡಿದು ಇಂದಿನವರೆಗೂ ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ಮಾತನಾಡಿರುವ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್, 'ನಾನು ಎಂದಿಗೂ ಟಿಆರ್ಪಿ ಹಿಂದೆ ಬಿದ್ದವನಲ್ಲ. ಜನರಿಗೆ ಇಷ್ಟವಾದ ಕಥೆ ನೀಡುವುದು ನನ್ನ ಮೊದಲ ಆದ್ಯತೆ. ಅಲ್ಲದೆ ವಿಷ್ಣುವರ್ಧನ್ ಮನೆತನದ ಘನತೆಗೆ ತಕ್ಕಂತೆ ಅವರಿಗೆ ಸೂಕ್ತವಾದ ಕಥೆ ಕೂಡಾ ನಮಗೆ ಬೇಕಿತ್ತು. ಇವೆಲ್ಲದರಲ್ಲೂ ನಾವು ಯಶಸ್ವಿಯಾಗಿದ್ದೇವೆ. ಧಾರಾವಾಹಿ ಮೊದಲ ಸ್ಥಾನದಲ್ಲಿರುವುದಕ್ಕೆ ನನಗೆ ಸಂತೋಷಕ್ಕಿಂತ ಹೆಚ್ಚಾಗಿ ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ನಾನು ನಿಭಾಯಿಸುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
