ಎಂ.ಎಸ್. ರಮೇಶ್ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿರುವ 'ದಶರಥ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇನ್ನು 'ಯುದ್ಧಕಾಂಡ' ಸಿನಿಮಾ ನಂತರ ರವಿಚಂದ್ರನ್ 'ದಶರಥ' ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಜೊತೆ ಸೋನಿಯಾ ಅಗರ್ವಾಲ್ ಹಾಗೂ ಅಭಿರಾಮಿ ನಟಿಸಿದ್ದಾರೆ.
ಈ ದಶರಥ ತೇತ್ರಾಯುಗದ ದಶರಥ ಅಲ್ಲ, ಆಧುನಿಕ ದಶರಥ. ವೃತ್ತಿಯಲ್ಲಿ ವಕೀಲ, ಅನೇಕ ಕೇಸ್ಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿರುತ್ತಾನೆ. ಆದರೆ ಈ ಬುದ್ಧಿವಂತನಿಗೆ ದೊಡ್ಡ ಕಂಟಕ ಎದುರಾದರೆ ಅದನ್ನು ಆತ ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಹಿರಿಯ ಸಂಭಾಷಣೆಗಾರ ಹಾಗೂ ನಿರ್ದೇಶಕ ಎಂ.ಎಸ್. ರಮೇಶ್ 'ದಶರಥ' ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ಇಲ್ಲಿ ಪ್ರೀತಿಯ ಎಳೆಯಿದೆ, ತಂದೆ ಮಗಳ ಅವಿನಾಭಾವ ಸಂಬಂಧ ಇದೆ, ಕೆಲವು ಪವರ್ಫುಲ್ ಸಂಭಾಷಣೆ ಇದೆ.
ದಶರಥ ಪ್ರಸಾದ್ (ವಿ. ರವಿಚಂದ್ರನ್) ಮಗಳು ಶಾಂತಿ (ಮೇಘಶ್ರೀ) ದಿಟ್ಟ ಹುಡುಗಿ ಆದರೂ ಶ್ರೀಮಂತ ಹುಡುಗ ಕಿರಣ್ (ಆದರ್ಶ್) ಆಕೆಗೆ ಮೋಸ ಮಾಡಿರುತ್ತಾನೆ. ಸುಮಾರು 20 ವರ್ಷಗಳ ಹಿಂದೆ ದಶರಥನನ್ನು ಪ್ರೀತಿಸಿದ್ದ ಅಭಿರಾಮಿ ಸಹೋದರನೇ ಈ ಕಿರಣ್. ಆದರೆ ಅದು ಒನ್ ವೇ ಪ್ರೀತಿಯಾಗಿರುತ್ತದೆ. ದಶರಥ ಪ್ರಸಾದ್ ತನ್ನ ಸಹೋದ್ಯೋಗಿ ಕೌಶಲ್ಯ (ಸೋನಿಯಾ ಅಗರ್ವಾಲ್) ಳನ್ನು ಮದುವೆ ಆಗುವುದು ಅಭಿರಾಮಿ ಕೋಪಕ್ಕೆ ಕಾರಣ ಆಗಿರುತ್ತದೆ. ತನ್ನ ಸಹೋದರನ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಆದರೆ ಮಗಳಿಗೆ ಮೋಸ ಆದಾಗ ಕಿರಣ್ ಮೇಲೆ ದಶರಥ ಕೇಸ್ ಹಾಕಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಹೇಗಾದರೂ ಮಾಡಿ ತಮ್ಮನನ್ನು ಈ ಕೇಸ್ ಸುಳಿಯಿಂದ ಹೊರತರಲು ಅಭಿರಾಮಿ ಖ್ಯಾತ ವಕೀಲ (ರಂಗಾಯಣ ರಘು)ನನ್ನು ನೇಮಿಸುತ್ತಾಳೆ. ಆತನ ಜೊತೆ ದಶರಥ ಹೇಗೆ ವಾದ ಮಾಡುತ್ತಾನೆ..? ಈ ಕೇಸ್ ಯಾರ ಪರ ಆಗುತ್ತದೆ..? ದಶರಥನ ಮಗಳಿಗೆ ನ್ಯಾಯ ದೊರೆಯುವುದಾ ಇಲ್ಲವಾ ಎಂಬುದು ಚಿತ್ರದ ಕಥೆ.
ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ವಯಸ್ಸಿಗೆ ತಕ್ಕದಾದ ಪಾತ್ರ. ‘ದೃಶ್ಯ’ ನಂತರ ಮತ್ತೊಮ್ಮೆ ಮಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯುತ ತಂದೆ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಸೋನಿಯಾ ಅಗರ್ವಾಲ್ಗೆ ಅಂತಹ ಪ್ರಾಮುಖ್ಯವಿಲ್ಲ. ಇನ್ನು ಅಭಿರಾಮಿಯದ್ದು ದಿಟ್ಟ ಪಾತ್ರ. ಮೇಘಶ್ರೀ ರವಿಚಂದ್ರನ್ ಮಗಳಾಗಿ ಚೆನ್ನಾಗಿ ನಟಿಸಿದ್ದಾರೆ. ಆದರ್ಶ್ಗೆ ನಿಜಕ್ಕೂ ಒಳ್ಳೆಯ ಭವಿಷ್ಯವಿದೆ. ರಂಗಾಯಣ ರಘು ಮಾತೇ ಈ ಸಿನಿಮಾದಲ್ಲಿ ಅವರ ಪಾತ್ರದ ಬಂಡವಾಳ, ಹೇಮಚೌಧರಿ ನ್ಯಾಯಾಧೀಶೆ ಆಗಿ ಇಷ್ಟ ಆಗುತ್ತಾರೆ. ಇನ್ನು ನಟ ಅವಿನಾಶ್ ಬಗ್ಗೆ ಹೇಳುವ ಅವಶ್ಯಕತೆಯಿಲ್ಲ.
ಗುರುಕಿರಣ್ ಅವರ ಎರಡು ಹಾಡುಗಳು ಮತ್ತೆ ಕೇಳಬಹುದು. ಹಿರಿಯ ಛಾಯಾಗ್ರಾಹಕ ಜಿ.ಎಸ್.ವಿ. ಸೀತಾರಾಂ ಕೈಚಳಕ ಎಂದಿನಂತೆ ಸುಂದರವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರಕ್ಕೆ ಆರಂಭದಲ್ಲಿ ಧ್ವನಿ ನೀಡಿದ್ದಾರೆ ಮತ್ತು ಅವರ ಕೆಲವು ಮಾತುಗಳನ್ನು ಹಾಡಿನ ರೂಪಕ್ಕೆ ತರಲಾಗಿದೆ. ಹೆಣ್ಣು ಮಕ್ಕಳಿರುವವರು ಖಂಡಿತ ಈ ಸಿನಿಮಾವನ್ನು ನೋಡಬಹುದು.