ಸ್ಯಾಂಡಲ್ವುಡ್ನಲ್ಲಿ ತುಂಬಾ ಪ್ರಖ್ಯಾತಿ ಹೊಂದಿರುವ ಹೆಸರುಗಳು ಸಿನಿಮಾ ಟೈಟಲ್ ಆಗೋದು ಕಾಮನ್. ಇದೀಗ ಹೆಬ್ಬೆಟ್ಟು ರಾಮಕ್ಕ, ಸಾವಿತ್ರಿ ಬಾಯಿ ಫುಲೆಯಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಹಿರಿಯ ನಟಿ ತಾರಾ ಅನುರಾಧ 'ಸಾವಿತ್ರಿ' ಎಂಬ ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ. ಇಂದು ಈ ಸಿನಿಮಾದ ಮುಹೂರ್ತ ಬನಶಂಕರಿಯ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನಲ್ಲಿ ನಡೆಯಿತು.
ಈ ಚಿತ್ರದಲ್ಲಿ ಮುಖ್ಯವಾದ ಪಾತ್ರ ಮಾಡ್ತಿರೋ ವಿಜಯರಾಘವೇಂದ್ರ ಸಿನಿಮಾಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ನಂತರ ಮಾತನಾಡಿದ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ, ತಾರಾ ಜೊತೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದು, ಒಂದು ಕಂಪನಿಯ ಸಿಇಒ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎಂದರು. ಇನ್ನು ವಿಜಯ ರಾಘವೇಂದ್ರ ಜೋಡಿಯಾಗಿ ಕೆನಾಡ ಬೆಡಗಿ ಊರ್ವಶಿ ರಾಯ್ ನಟಿಸಲಿದ್ದಾರೆ.
ಸಾವಿತ್ರಿ ಹೆಸರಿನ ಪಾತ್ರ ಮಾಡ್ತಿರೋ ಬಗ್ಗೆ ನನಗೆ ಹೆಮ್ಮೆ ಇದೆ ಅಂತಾರೆ ತಾರಾ ಅನುರಾಧ. ಮೊಬೈಲ್ ಮತ್ತು ಆಧುನಿಕ ತಂತ್ರಜ್ಞಾನಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳೇನು ಎಂಬ ಕಥೆಯನ್ನ ಈ ಚಿತ್ರ ಒಳಗೊಂಡಿದೆ. ಈ ಹಿಂದೆ ಉಯ್ಯಾಲೆ ಸಿನಿಮಾ ನಿರ್ದೇಶನ ಮಾಡಿದ್ದ ಎಸ್ ದಿನೇಶ್ ಈ ಚಿತ್ರಕ್ಕೆ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಹಿತಿ ಹೃದಯ ಶಿವ, ಗೀತ ರಚನೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ.
ತಾರಾ, ವಿಜಯರಾಘವೇಂದ್ರ, ಊರ್ವಶಿ ರಾಯ್ ಜೊತೆ ಪ್ರಕಾಶ್ ಬೆಳವಾಡಿ, ಬಾಲ ನಟಿ ಬೇಬಿ ಲೈಲಾ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ. ಇಂದಿನಿಂದ ಚಿತ್ರೀಕರಣ ಶುರು ಮಾಡಿರುವ ಸಾವಿತ್ರಿ ಸಿನಿಮಾವನ್ನ, 45 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ. ಪಿ.ಎನ್. ಪಿ ಪ್ರೊಡಕ್ಷನ್ನಲ್ಲಿ ಪ್ರಶಾಂತ್ ಕುಮಾರ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.