ಹೆಬ್ಬೆಟ್ಟು ರಾಮಕ್ಕ, ಸಾವಿತ್ರಿಬಾಯಿ ಫುಲೆಯಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಹಿರಿಯ ನಟಿ ತಾರಾ ಅಂತಹದ್ದೇ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ತಾರಾ ಅನುರಾಧ ಅಭಿನಯಿಸುತ್ತಿರೋ ಹೊಸ ಚಿತ್ರದ ಟೈಟಲ್ ಸಾವಿತ್ರಿ. ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಂದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿರುವ ತಾರಾ, ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಬಗ್ಗೆ ಮೂಡಿ ಬರುತ್ತಿರುವ ಸಾವಿತ್ರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಎಸ್.ದಿನೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಉಯ್ಯಾಲೆ ಸಿನಿಮಾ ಮಾಡಿದ್ದ ನಿರ್ದೇಶಕ ದಿನೇಶ್ಗೆ ಸಾವಿತ್ರಿ ಎರಡನೇ ಚಿತ್ರ.
![tara playing role in savitri movie](https://etvbharatimages.akamaized.net/etvbharat/prod-images/kn-bng-10-mathie-savithreeyagi-bhratha-eddhare-thara-7204735_03112020162743_0311f_1604401063_599.jpg)
ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿಗೆ ಖ್ಯಾತ ಸಾಹಿತಿ ಹೃದಯ ಶಿವ ಗೀತರಚನೆ, ಸಂಭಾಷಣೆಯ ಜೊತೆಗೆ ಸಂಗೀತವನ್ನೂ ನೀಡಿದ್ದಾರೆ. ಇಷ್ಟು ದಿನ ಗೀತರಚನಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ತಾರಾ ಜೊತೆಗೆ ಪ್ರಕಾಶ್ ಬೆಳವಾಡಿ, ಸಂಜು ಬಸಯ್ಯ(ಕಾಮಿಡಿ ಕಿಲಾಡಿಗಳು), ಬೇಬಿ ಲೈಲಾ, ಪ್ರಮೋದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮೊಬೈಲ್ ಮುಂತಾದ ಆಧುನಿಕ ತಂತ್ರಜ್ಞಾನಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳೇನು ಎನ್ನುವುದು ಚಿತ್ರದ ಕಥಾಹಂದರ. ಚಿತ್ರದ ಚಿತ್ರೀಕರಣ ನವೆಂಬರ್ 19ರಿಂದ ಆರಂಭವಾಗಲಿದ್ದು, ಬೆಂಗಳೂರಿನ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಸಿನಿಮಾವನ್ನು ಪಿ.ಎನ್.ಪಿ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ ನಿರ್ಮಿಸುತ್ತಿದ್ದಾರೆ.