ಬಂಡಾಯ ಕವಿ, ದಲಿತ ಕವಿ ಎಂದೇ ಖ್ಯಾತರಾಗಿದ್ದ ಸಿದ್ದಲಿಂಗಯ್ಯ ಅವರು ಹೊಲೆಮಾದಿಗರ ಹಾಡು, ಕಪ್ಪು ಕಾಡಿನ ಹಾಡು, ಸಾವಿರಾರು ನದಿಗಳು, ಇನ್ನೂ ಹಲವಾರು ಕವನ ಸಂಕಲನಗಳ ಮೂಲಕ ಬಂಡಾಯದ ದನಿಗೆ ಶಕ್ತಿ ತುಂಬಿದವರು.
ಸಿದ್ದಲಿಂಗಯ್ಯ ಕೇವಲ ಬಂಡಾಯ ಕವಿತೆ ಮಾತ್ರವೇ ಅಲ್ಲದೇ, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಗಮನ ಸೆಳೆದವರು. ಇದರ ಜೊತೆಗೆ ಸಿದ್ದಲಿಂಗಯ್ಯಗೆ ಸಿನಿಮಾ ನಂಟು ಕೂಡ ಇದೆ.
ಸಿನಿಮಾಗಳಲ್ಲಿ ಕಾಡುವ ಪ್ರೇಮ ಗೀತೆಗಳನ್ನ ಬರೆಯುವ ಮೂಲಕ ಪ್ರೇಮ ಕವಿ ಎಂದು ಗುರುತಿಸಿಕೊಂಡಿದ್ದರು. ಅದಕ್ಕೆ ಸಾಕ್ಷಿ ಕನ್ನಡದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾಕ್ಕೆ, ಮೂರು ಹಾಡುಗಳನ್ನ ಬರೆದಿದ್ದಾರೆ.
ಶ್ರೀನಾಥ್, ಎಡಕಲ್ಲು ಚಂದ್ರಶೇಖರ್, ಜೈ ಜಗದೀಶ್ ಅಭಿನಯದ ಈ ಚಿತ್ರದಲ್ಲಿ, ಗೆಳತಿ ಓ ಗೆಳತಿ ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಒಂದು ಅಚ್ಚರಿ ಸಂಗತಿ ಅಂದರೆ, ಈ ಹಾಡಿಗೆ 1984ರಲ್ಲಿ ಅತ್ಯುತ್ತಮ ಗೀತೆ ಎಂದು ರಾಜ್ಯ ಪ್ರಶಸ್ತಿಯನ್ನ ಚೊಚ್ಚಲ ಸಿನಿಮಾಕ್ಕೆ ಸಿದ್ದಲಿಂಗಯ್ಯ ಪಡೆದಿದ್ದರು.
ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ , ಶಿವರಾಮ್ ಅಭಿನಯದ ಬಾ ನಲ್ಲೇ ಮಧುಚಂದ್ರಕ್ಕೆ ಚಿತ್ರದಲ್ಲಿ, ಸಿದ್ದಲಿಂಗಯ್ಯನವರು ಮತ್ತೊಂದು ಹಿಟ್ ಹಾಡನ್ನ ಬರೆಯುತ್ತಾರೆ. ಅದುವೇ ,ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ ಹಾಡು.
ಈ ಎರಡು ಚಿತ್ರಗಳ ಬಳಿಕ ಪ್ರತಿಭಟನೆ ಎಂಬ ಚಿತ್ರಕ್ಕೆ ಸಿದ್ದಲಿಂಗಯ್ಯನವರು ಸಾಹಿತ್ಯ ಬರೆಯುತ್ತಾರೆ. ಸಿದ್ದಲಿಂಗಯ್ಯನವರು ಮೂರು ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದಾರೆ. ಬಾ ನಲ್ಲೆ ಮಧುಚಂದ್ರಕೆ ಹಾಗು ಪುಟ್ಟಣ್ಣ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಹಾಡುಗಳು ಬಹಳ ಜನಪ್ರಿಯ ಗೀತೆಗಳಾಗಿವೆ. ಈ ಗೀತೆಗಳಿಂದ ಸಿದ್ದಲಿಂಗಯ್ಯ ಅವ್ರನ್ನ ಪ್ರೇಮ ಗೀತೆಯ ಕವಿ ಎಂದು ಕರೆಯುತ್ತಿದ್ದರು.