ಬಾಲನಟನಾಗಿ ಕಿರುತೆರೆಗೆ ಕಾಲಿಟ್ಟಿದ್ದ ಶ್ರೀನಗರ ಕಿಟ್ಟಿ ಈಗ ಉದಯ ಟಿವಿಯಲ್ಲಿ ಪ್ರಸಾರವಾಗುವ 'ಜೀವನದಿ' ಧಾರಾವಾಹಿಯಲ್ಲಿ ಅತಿಥಿಯಾಗಿ ಕಿರುತೆರೆಯಲ್ಲಿ ಬರಲಿದ್ದಾರೆ. ಸರಸ್ವತಿ ನಟರಾಜನ್ ಅವರ ಕಾದಂಬರಿ ಆಧರಿಸಿ 'ಜೀವನದಿ' ಧಾರಾವಾಹಿ ನಿರ್ಮಿಸಲಾಗುತ್ತಿದ್ದು ಈಗಾಗಲೇ 560 ಸಂಚಿಕೆಗಳು ಪ್ರಸಾರವಾಗಿ ಕನ್ನಡದ ಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಇದೀಗ ಧಾರಾವಾಹಿಗಳಲ್ಲಿ ನಟ-ನಟಿಯರು ಅತಿಥಿ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಮೂಲಕ ಧಾರಾವಾಹಿ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ ಎಂಬುದು ಧಾರಾವಾಹಿ ತಂಡದ ಅಭಿಪ್ರಾಯ.
ಇದೀಗ ನಟ ಶ್ರೀನಗರ ಕಿಟ್ಟಿ ಅವರನ್ನು ಕರೆಸುವ ಮೂಲಕ 'ಜೀವನದಿ' ಧಾರಾವಾಹಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬುದು ತಂಡದ ಅನಿಸಿಕೆ. ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಕಿಟ್ಟಿ ಅಭಿನಯದ ಸಂಚಿಕೆ ಪ್ರಸಾರವಾಗಲಿದೆ. 2003ನೇ ಸಾಲಿನಲ್ಲಿ 'ಚಂದ್ರಚಕೋರಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಶ್ರೀನಗರ ಕಿಟ್ಟಿ 'ಗೌಡ್ರು', 'ಲವ್ಸ್ಟೋರಿ', 'ಆದಿ', 'ಅಯ್ಯ' ಮತ್ತು 'ವಿಷ್ಣು ಸೇನೆ'ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ 'ಗಿರಿ' ಮತ್ತು 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿ ನಾಯಕನಾಗಿ ಭಡ್ತಿ ಪಡೆದರು. ಅಲ್ಲಿಂದ 'ಒಲವೇ ಜೀವನ ಲೆಕ್ಕಾಚಾರ', 'ಜನುಮದ ಗೆಳತಿ', 'ಮತ್ತೆ ಮುಂಗಾರು', 'ಸವಾರಿ', 'ಮಳೆ ಬರಲಿ ಮಂಜೂ ಇರಲಿ', 'ಸ್ವಯಂವರ', 'ಸಂಜು ವೆಡ್ಸ್ ಗೀತಾ' ಮತ್ತು 'ಹುಡುಗರು' ಚಿತ್ರದಲ್ಲಿ ನಟಿಸಿದ್ದಾರೆ.