ಸಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ಇದೆ ಎಂಬುದು ನನಗೆ ಗೊತ್ತಿಲ್ಲ. ನಮ್ಮ ಸಿನಿರಂಗದಲ್ಲಿ ಇರೋದನ್ನ ನಾನು ನೋಡಿಲ್ಲ. ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡಬಾರದು. ಇರೋದು ಸಾಬೀತಾದರೆ ಸುಳ್ಳು ಅಂತಲೂ ಹೇಳೋಕಾಗಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹೇಳಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯ ಹಾಗೂ ನಿರ್ದೇಶಕ ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ವೆಬ್ಸೈಟ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಗಾಂಜಾ, ಡ್ರಗ್ಸ್ ದಂಧೆ ಮೊದಲಿನಿಂದಲೂ ಇದೆ. ಒಬ್ಬ ಒಳ್ಳೆಯವನಿದ್ದಾನೆ ಅಂದರೆ, ಆತನಲ್ಲಿ ಕೆಟ್ಟತನವೂ ಇರುತ್ತೆ. ಮೋಜಿಗೋಸ್ಕರ ಮಾಡಲಾಗುತ್ತೆ ಅಂತಾರೆ, ಆದರೆ ಅದು ವಿಪರೀತ ಆಗಬಾರದು. ಸಮಾಜದಲ್ಲಿ ನಾವು ಎಲ್ಲರಿಗೂ ಮಾದರಿಯಾಗಿರಬೇಕು ಎಂದ್ರು.
ಈ ಬಗ್ಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತನಿಖೆ ನಡೆಯುತ್ತಿದೆ, ಡ್ರಗ್ಸ್ ದಂಧೆ ಇದ್ದರೆ ಆ ಸತ್ಯ ಹೊರಬರಬೇಕು. ದಂಧೆ ಅಂತಾ ಹೇಳುತ್ತಿರುವವರು ತಮಗೆ ಗೊತ್ತಿದ್ದರೆ ಹೆದರದೆ, ಧೈರ್ಯವಾಗಿ ಮುಂದೆ ಬಂದು ಹೇಳಬೇಕು. ಈ ಬಗ್ಗೆ ತನಿಖೆ ನಡೆಸೋದಕ್ಕೆ ಅಧಿಕಾರಿಗಳು ಇದ್ದಾರೆ ಎಂದು ತಿಳಿಸಿದ್ರು.
ಚಿತ್ರರಂಗವನ್ನ ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯಬೇಕಂದ್ರೆ, ಎಲ್ಲರ ಬೆಂಬಲ ಅಗತ್ಯ. ಒಬ್ಬನಿಂದ ಏನೂ ಸಾಧ್ಯವಿಲ್ಲ. ನಾನು ಯಾರಿಗೂ ಸಲಹೆ ನೀಡುವುದಿಲ್ಲ. ನಮ್ಮ ಜೀವನವನ್ನ ನಾವು ಪ್ರೀತಿಸಬೇಕು. ಹುಟ್ಟು ಅನ್ನೋದು ಅಮೂಲ್ಯವಾದ ಉಡುಗೊರೆ, ಅದನ್ನ ನಾವು ಕಾಪಾಡಿಕೊಂಡು ಹೋಗಬೇಕು. ಸಲಹೆ ನೀಡುವಷ್ಟು ದೊಡ್ಡವನೂ ನಾನಲ್ಲ ಎಂದು ಶಿವಣ್ಣ ಹೇಳಿದ್ರು.