ನಾಳೆ ವರನಟ ಡಾ. ರಾಜ್ಕುಮಾರ್ ಅವರ 92 ನೇ ವರ್ಷದ ಜನ್ಮದಿನ. ಲಾಕ್ಡೌನ್ ಕಾರಣದಿಂದ ಪ್ರತಿ ಬಾರಿಯಂತೆ ಈ ಬಾರಿ ಅಣ್ಣಾವ್ರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಿಲ್ಲ. ಆದ್ದರಿಂದ ಅಭಿಮಾನಿಗಳು ಈ ಬಾರಿ ಸರಳವಾಗಿಯಾದರೂ ಬಹಳ ಅರ್ಥಪೂರ್ಣವಾಗಿ ಡಾ. ರಾಜ್ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ.
ಡಾ. ರಾಜ್ಕುಮಾರ್ ಹುಟ್ಟುಹಬ್ಬ ಸಂಬಂಧ ಇಂದು ಸಭೆ ನಡೆಸಿ ಮಾತನಾಡಿದ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಬರ್ತಡೇಯನ್ನು ರೈತರಿಂದ ಹಣ್ಣು ತರಕಾರಿ ಖರೀದಿಸಿ ಮಕ್ಕಳು ಹಾಗೂ ಅಗತ್ಯವುಳ್ಳವರಿಗೆ ಹಂಚುವ ಮೂಲಕ ವಿಶೇಷವಾಗಿ ಆಚರಿಸಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ಪ್ರತಿವರ್ಷ ಅಣ್ಣಾವ್ರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೆವು. ಆದರೆ ಈ ವರ್ಷ ಅಂತಹ ಸಂಭ್ರಮ ಇಲ್ಲ. ಕೊರೊನಾ ವೈರಸ್ ಎಲ್ಲಾ ಕಡೆ ಆತಂಕ ನಿರ್ಮಾಣ ಮಾಡಿದೆ. ಆದ್ದರಿಂದ ನೀವೆಲ್ಲಾ ಮನೆಯಲ್ಲೇ ಸರಳವಾಗಿ ಅಣ್ಣಾವ್ರ ಹುಟ್ಟುಹಬ್ಬ ಆಚರಿಸಿ. ಪಾಸ್ ಇರುವವರು ಬಡವರಿಗೆ ಹಣ್ಣು, ಹಂಫಲುಗಳನ್ನು ನೀಡುವ ಮೂಲಕ ಅಣ್ಣಾವ್ರ ಹುಟ್ಟುಹಬ್ಬ ಆಚರಿಸಿ ಎಂದು ಮನವಿ ಮಾಡಿದ್ದಾರೆ.
ನಟಿ ತಾರಾ ಅನುರಾಧ ಒಂದು ದಿನ ಮುನ್ನವೇ ಅಂದರೆ ಇಂದೇ ಡಾ. ರಾಜ್ಕುಮಾರ್ ಹುಟ್ಟುಹಬ್ಬ ಆಚರಿಸಿದ್ದಾರೆ. ಬೆಂಗಳೂರಿನ ಸ್ನೇಹದೀಪ ಸಂಸ್ಥೆಯ ವಿಶೇಷ ಚೇತನ ಮಕ್ಕಳಿಗೆ ಮಾಸ್ಕ್ ವಿತರಿಸಿ, ಊಟ ಹಂಚುವ ಮೂಲಕ ಅಣ್ಣಾವ್ರ ಬರ್ತಡೇ ಆಚರಿಸಿದ್ದಾರೆ. ಅಲ್ಲದೆ ಮಕ್ಕಳ ಕೈಯ್ಯಲ್ಲೇ ಕೇಕ್ ಕತ್ತರಿಸಿದ್ದಾರೆ.