ಸಾಮಾಜಿಕ ಜಾಲತಾಣದಿಂದ ಎಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆಯೂ ಅಷ್ಟೇ ಅಭಾಸಗಳು ಕೂಡಾ ಉಂಟಾಗುತ್ತಿವೆ. ಇದರಿಂದ ಆಗುತ್ತಿರುವ ಅನಾಹುತಗಳು ಒಂದಲ್ಲಾ ಎರಡಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಬ್ಬುವ ವಿಚಾರಗಳನ್ನು ಎಷ್ಟೋ ಮಂದಿ ಪರಾಮರ್ಶಿಸದೆ ನಂಬಿಬಿಡುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಆರ್ಟಿಓ ಅಧಿಕಾರಿ ಮಂಜುನಾಥ್ ಸಾವಿನ ಪ್ರಕರಣ.
ಆರ್ಟಿಓ ಅಧಿಕಾರಿ ಮಂಜುನಾಥ್ ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಸಣ್ಣ ಅಪಘಾತ ಮಾಡಿ ಪ್ರಜ್ಞೆ ತಪ್ಪಿಬಿದ್ದಾಗ ಅವರು ಸಂಪೂರ್ಣ ಕುಡಿದಿದ್ದರು ಎಂದು ತಪ್ಪಾಗಿ, ಕೆಟ್ಟದಾಗಿ ಬಿಂಬಿಸಲಾಗಿತ್ತು. ಆದರೆ ನಿಜ ವಿಚಾರ ಎಂದರೆ ಆರ್ಟಿಓ ಅಧಿಕಾರಿ ಮಂಜುನಾಥ್ ಮದ್ಯ ವ್ಯಸನಿಯಲ್ಲ. ಅವರಿಗೆ ಲೋ ಬಿಪಿ ಆಗಿದ್ದರಿಂದ ಕುಸಿದುಬಿದ್ದಿದ್ದಾರೆ. ಅಲ್ಲದೆ ವೈಯಕ್ತಿವಾಗಿ ಕೂಡಾ ಅವರು ಬಹಳ ಒಳ್ಳೆ ವ್ಯಕ್ತಿ. ಅನೇಕರಿಗೆ ಹಣದ ಸಹಾಯ ಮಾಡಿದವರು ಮಂಜುನಾಥ್. ಆದರೆ ಅವರ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳ ಕೆಟ್ಟದಾಗಿ ಬಿಂಬಿಸಲಾಗಿತ್ತು. ಇದರಿಂದ ಅವರ ಕುಟುಂಬಕ್ಕೆ ಬಹಳ ನೋವುಂಟಾಗಿತ್ತು. ಈ ಘಟನೆ ಸಂಬಂಧ ಇದೀಗ ಕಿರುಚಿತ್ರವೊಂದು ತಯಾರಾಗಿದೆ.
ಫಿಲ್ಮ್ ಅಕಾಡೆಮಿಯ ಯತಿರಾಜ್, ಅರವಿಂದ್ ರಾವ್, ಭಾಸ್ಕರ್, ಸುಧೀಂದ್ರ ವೆಂಕಟೇಶ್ ಹಾಗೂ ಆರ್. ಚಂದ್ರಶೇಖರ್ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿ ಒಂದು ಸಾಮಾಜಿಕ ಜವಾಬ್ದಾರಿಯನ್ನು ತೋರಿದ್ದಾರೆ. ಆರ್ಟಿಓ ಅಂದರೆ ‘ರೈಟ್ ಟು ಅಪ್ಪೋಸ್’ ಎಂದು ಅರ್ಥ. ಆರ್ಟಿಓ ಅಧಿಕಾರಿ ಮಂಜುನಾಥ್ ಪಾತ್ರವನ್ನು ಯತಿರಾಜ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಕಿರುಚಿತ್ರಕ್ಕೆ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಇದೆ. ನುರಿತ ನಟ ಅರವಿಂದ್ ರಾವ್ ಸಲಹೆ ಮೇರೆಗೆ ಫಿಲ್ಮ್ ಅಕಾಡೆಮಿ ವಿಧ್ಯಾರ್ಥಿಗಳು ಈ ಕಿರುಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಈ ಕಿರುಚಿತ್ರವನ್ನು ಮಂಜುನಾಥ್ ಪತ್ನಿ ಶೈಲ ಕೂಡಾ ವೀಕ್ಷಿಸಿದ್ದಾರೆ. ಕಳ್ಳರಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ. ಆದರೆ ನನ್ನ ಪತಿಯಂತ ಅಮಾಯಕರಿಗೆ ಈ ರೀತಿಯ ಶಿಕ್ಷೆ ಆಗಬಾರದು. ಯಾವುದೇ ವಿಚಾರನ್ನು ಪರಾಮರ್ಶಿಸಿ ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿ ಎಂದು ಮನವಿ ಮಾಡಿದ್ದಾರೆ.