ಕನ್ನಡ ಚಿತ್ರರಂಗದ ನಟ, ನಿರೂಪಕ, ನಿರ್ದೇಶಕ ರಮೇಶ್ ಅರವಿಂದ್ ಮುಖದಲ್ಲಿ ಗೆಲುವಿನ ಮಂದಹಾಸ ಕಾಣುತ್ತಿದೆ. 'ಶಿವಾಜಿ ಸುರತ್ಕಲ್' ಸಿನಿಮಾ ಗೆಲುವಿನ ಹಾದಿಯಲ್ಲಿ ಸಾಗುತ್ತಿರುವುದು ಇದಕ್ಕೆ ಕಾರಣ. ಈ ಬ್ರೇಕ್ಗಾಗಿ ರಮೇಶ್ ಅರವಿಂದ್ ಬಹಳ ದಿನಗಳಿಂದ ಕಾಯುತ್ತಿದ್ದರು.
ಉಲ್ಟಾ ಪಲ್ಟಾ, ರಾಮ ಶಾಮ ಭಾಮ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು ರೀತಿಯ ಸೂಪರ್ ಹಿಟ್ ಸಿನಿಮಾ ಮತ್ತೆ ಬರಬೇಕು ಎಂದು ರಮೇಶ್ ಕಾಯುತ್ತಿದ್ದರು. ಆದರೆ ಅವೆಲ್ಲಾ ಕಾಮಿಡಿ ಸಿನಿಮಾಗಳು. ಈ ಬಾರಿ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಅವರಿಗೆ ಗೆಲುವು ತಂದು ನೀಡಿರುವುದು ವಿಶೇಷ. ರಮೇಶ್ ಅರವಿಂದ್ ಹೇಳಿ ಕೇಳಿ ಫ್ಯಾಮಿಲಿ ಸ್ಟಾರ್. ಅಂದಿನ ದಿನಗಳಲ್ಲಿ ಇವರಿಗೆ ‘ತ್ಯಾಗರಾಜ’ ಎಂಬ ಪಟ್ಟ ಬಂದಿತ್ತು. 'ಅಮೆರಿಕ ಅಮೆರಿಕ' ಸಿನಿಮಾದಿಂದ ರಮೇಶ್ ಬೇರೆ ಶೇಡ್ ಅನಾವರಣವಾಯಿತು. ಇದೀಗ ಥ್ರಿಲ್ಲರ್ ಕಥಾವಸ್ತು ಕೂಡಾ ಇವರಿಗೆ ಹೇಳಿ ಮಾಡಿಸಿದಂತಿದೆ. ಈ ಚಿತ್ರದ ನಂತರ ರಮೇಶ್ ಅರವಿಂದ್ ಬೇರೆಯೇ ಶೇಡ್ ಅನಾವರಣ ಆಗುತ್ತಾ ಹೋಯ್ತು. ಈಗ ಥ್ರಿಲ್ಲರ್ ಕಥಾ ವಸ್ತು ಇವರಿಗೆ ಹಿಡಿಸಿದಂತೆ ಕಾಣುತ್ತದೆ.
ಮೊದಲ ವಾರದಲ್ಲಿ 80 ಪರದೆಗಳಲ್ಲಿ ಬಿಡುಗಡೆ ಆದ ಶಿವಾಜಿ ಸುರತ್ಕಲ್, ಎರಡನೇ ವಾರಕ್ಕೆ 40 ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಆವರಿಸುತ್ತಿದೆ. ಅಷ್ಟೇ ಅಲ್ಲದೆ, ಮಾರ್ಚ್ 6 ರಿಂದ ಯುಕೆ, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಇನ್ನಿತರ ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಿಂದ ಆಚೆಗೆ ದೆಹಲಿ, ಹೈದರಾಬಾದ್, ಚೆನ್ನೈನಂತ ನಗರಗಳಲ್ಲಿ ಕನ್ನಡದ 'ಶಿವಾಜಿ ಸುರತ್ಕಲ್' ಬಿಡುಗಡೆ ಆಗುತ್ತಿದೆ. ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಈ ಸಿನಿಮಾದ ಹಕ್ಕು ಕೇಳಲಾಗಿದೆ. ಸಿನಿಮಾ ಹಿಟ್ ಆದ ನಂತರ ಈ ಚಿತ್ರಕ್ಕೆ ಟಿವಿ ರೈಟ್ಸ್ ಹಾಗೂ ಡಿಜಿಟಲ್ ಹಕ್ಕು ಒಳ್ಳೆಯ ಮೊತ್ತಕ್ಕೆ ಸಹ ಸಂದಾಯ ಆಗುತ್ತಿದೆ.
ನಿರ್ಮಾಪಕ ಅನೂಪ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಇಂಜಿನಿಯರಿಂಗ್ ಪದವೀಧರರು. ನಮ್ಮ ಹಿರಿಯರು ವ್ಯವಸಾಯ ವೃತ್ತಿ ಮಾಡುತ್ತಿದ್ದು ಆ ಹಣವನ್ನು ಸಿನಿಮಾಗೆ ಹಾಕಿದ್ದು ವ್ಯರ್ಥ ಆಗಲಿಲ್ಲ ಎಂದು ಖುಷಿಯಿಂದ ಹೇಳಿಕೊಂಡರು. ಇನ್ನು ಆಕಾಶ್ ಶ್ರೀವತ್ಸ ಮೊದಲು 'ಸುಳ್ಳೆ ಸತ್ಯ' ಎಂಬ ಕಿರುಚಿತ್ರ ಮಾಡಿ ನಂತರ ಧನಂಜಯ್ ಅಭಿನಯದ 'ಬದ್ಮಾಷ್' ಚಿತ್ರದಿಂದ ಖ್ಯಾತಿ ಪಡೆದವರು. ಶಾಲಾ ದಿನಗಳಲ್ಲಿ ಊರ್ವಶಿ ಚಿತ್ರಮಂದಿರದ ಮುಂದೆ ನಿಂತು ಇಲ್ಲಿ ನನ್ನ ಕನ್ನಡ ಚಿತ್ರದ ಪೋಸ್ಟರ್ ಹಾಕುವುದು ನೋಡಬೇಕು ಎಂದು ಕನಸು ಕಂಡವರು. ಈಗ ಅವರದ್ದೇ ನಿರ್ದೇಶನದ ‘ಶಿವಾಜಿ ಸುರತ್ಕಲ್’ ಚಿತ್ರದಿಂದ ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹಿಂದಿ ಚಿತ್ರಗಳನ್ನೇ ಪ್ರದರ್ಶನ ಮಾಡುವ ಊರ್ವಶಿ, ವೈಭವ್ನಂಥ ಚಿತ್ರಮಂದಿರಗಳು ‘ಶಿವಾಜಿ ಸುರತ್ಕಲ್’ ಸಿನಿಮಾ ಪ್ರದರ್ಶನವನ್ನು ಎರಡನೇ ವಾರಕ್ಕೂ ಮುಂದುವರೆಸಿದ್ದಾರೆ.