ಅಭಿನಯ ಚತುರ, ನಟ ನೀನಾಸಂ ಸತೀಶ್ ಸಕಲಕಲಾವಲ್ಲಭ ಅನ್ನೋದು ಗೊತ್ತಿರುವ ವಿಚಾರ. ನಟನೆ, ನಿರ್ದೇಶನ, ನಿರ್ಮಾಣ ಹೀಗೆ ಹಲವು ಕ್ಷೇತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸೈ ಅನಿಸಿಕೊಂಡಿರುವ ಕ್ವಾಟ್ಲೆ ಸತೀಶ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಕೊರೊನಾ ಲಾಕ್ ಡೌನ್ ವೇಳೆ ಶೂಟಿಂಗ್ ಇಲ್ಲದೆ ಮನೆ ಸೇರಿದ್ದ ಸತೀಶ್, ಬಿಡುವಿನ ವೇಳೆಯಲ್ಲಿ ಜನರಿಗೆ ಉಪಯೋಗವಾಗುವಂತೆ ಏನಾದ್ರೂ ಮಾಡಬೇಕೆಂಬ ಹಂಬಲದಲ್ಲಿದ್ದರು. ಖಿನ್ನತೆಗೆ ಒಳಗಾಗಿ ನರಳುವವರಿಗೆ ಸ್ಪೂರ್ತಿ ತುಂಬುವ ಸಲುವಾಗಿ ಈಗ ಕಥೆಗಾರನಾಗಿದ್ದಾರೆ. ಸತೀಶ್ ತುಂಬಾ ಇಂಟ್ರೆಸ್ಟಿಂಗ್ ಹಾಗೂ ಸ್ಪೂರ್ತಿದಾಯಕ ಸಣ್ಣ ಸಣ್ಣ ಕಥೆಗಳನ್ನು ಹೇಳೊಕೆ ರೆಡಿಯಾಗಿದ್ದಾರೆ. ಸಮಸ್ಯೆ ಸವಾಲು ಜೀವನದಲ್ಲಿ ಎಲ್ಲರಿಗೂ ಇದ್ದದ್ದೇ. ಇದನ್ನು ಸಮರ್ಥವಾಗಿ ಎದುರಿಸುವುದೇ ಜೀವನ. ಇನ್ನು ಸಾಧಿಸಿದವರು ಜೀವನದಲ್ಲಿ ಇತರರಿಗೆ ಸ್ಪೂರ್ತಿಯಾಗ್ತಾರೆ. ಆದರೆ ಸಾಧಿಸೋಕೆ ಸ್ಪೂರ್ತಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಅದರಲ್ಲೂ ಈ ಕೊರೊನ ಲಾಕ್ ಡೌನ್ ವೇಳೆ ಸಾಕಷ್ಟು ಜನರಿಗೆ ಖಿನ್ನತೆ ಅನ್ನೋದು ಬಹಳ ಕಾಡಿದೆ.
ಖಿನ್ನತೆಗೆ ಒಳಗಾದ ಸಮಯದಲ್ಲಿ ಕೆಲವೊಂದು ಸ್ಪೂರ್ತಿದಾಯಕ ಕಥೆಗಳನ್ನು ಕೇಳುವುದರಿಂದ ನಾವು ಕೂಡಾ ಮೋಟಿವೇಟ್ ಆಗುತ್ತೇವೆ. ಆದ್ದರಿಂದ ನಾನು ಇಂತಹ ಉತ್ಸಾಹ ಭರಿತ ಕೆಲಸಕ್ಕೆ ಕೈ ಹಾಕಿದ್ದೇನೆ ಎಂದು ಸತೀಶ್ ನೀನಾಸಂ ಹೇಳಿದ್ದಾರೆ. ಜನರಿಗೆ ಸ್ಪೂರ್ತಿದಾಯಕ ಕಥೆಗಳನ್ನು ಹೇಳುವ ಸಲುವಾಗಿ ಸತೀಶ್, ಆಡಿಯೋ ಹೌಸ್ ಯೂಟ್ಯೂಬ್ ಚಾನಲ್ನಲ್ಲಿ 'ಒಂದು ಕಥೆ ಹೇಳ್ತಿನಿ ಕೇಳ್ತಿರಾ.....?' ಎಂಬ ವಿಭಿನ್ನ ಹೆಸರಿನ ಎಪಿಸೋಡ್ ಪ್ರಾರಂಭಿಸಿದ್ದಾರೆ. ಅಲ್ಲದೆ ಮೊದಲ ಎಪಿಸೋಡ್ನಲ್ಲಿ ಸಿಹಿತಿಂಡಿ ಮಾರುವ ಅಜ್ಜಿಯ ಕಥೆಯನ್ನು ಹೇಳಿದ್ದಾರೆ. ಇನ್ನು ಸತೀಶ್ ವಾರಕ್ಕೊಂದು ಎಪಿಸೋಡ್ ಪ್ರಕಾರ ಪ್ರತಿ ವಾರ ಒಂದೊಂದು ಸ್ಫೂರ್ತಿದಾಯಕ ಕಥೆ ಹೇಳುವ ಮೂಲಕ ಖಿನ್ನತೆಗೆ ಒಳಗಾಗಿರುವವರಿಗೆ ಸ್ಪೂರ್ತಿ ತುಂಬುವ ಉತ್ತಮ ಕೆಲಸಕ್ಕೆ ಕೈ ಹಾಕಿದ್ದಾರೆ.