ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ನಾನು ಮತ್ತು ಗುಂಡ' ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗುಂಡನ ವಾತ್ಸಲ್ಯ ನೋಡಿದ ಸ್ಯಾಂಡಲ್ವುಡ್ ಸೆಲಬ್ರಿಟಿಗಳು ಅವನನ್ನು ಹಾಡಿ ಹೊಗಳಿದ್ದಾರೆ.
'ನಾನು ಮತ್ತು ಗುಂಡ' ಚಿತ್ರತಂಡ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಗುಂಡನನ್ನು ನೋಡಲು ನಿಖಿಲ್ ಕುಮಾರಸ್ವಾಮಿ, ಅದಿತಿ ಪ್ರಭುದೇವ, ಸತೀಶ್ ನೀನಾಸಂ, ನಿರ್ದೇಶಕರಾದ ಭರ್ಜರಿ ಚೇತನ್ ಎ.ಪಿ. ಅರ್ಜುನ್, ಜೋಗಿ ಪ್ರೇಮ್ ಸೇರಿದಂತೆ ಬಹಳಷ್ಟು ಸ್ಯಾಂಡಲ್ವುಡ್ ಸ್ಟಾರ್ಗಳು ಆಗಮಿಸಿದ್ದರು. ಚಿತ್ರ ನೋಡಿದ ಅದಿತಿ ಪ್ರಭುದೇವ ಬಹಳ ಭಾವುಕತೆಯಿಂದ ಗುಂಡನ ಬಗ್ಗೆ ಮಾತನಾಡಿದರು. ಬಹುಶ: ಈ ಭೂಮಿ ಮೇಲೆ ತಾಯಿ ಪ್ರೀತಿ ಬಿಟ್ಟರೆ ಮತ್ತೆ ನಮಗೆ ಅಂತಹ ನಿಸ್ವಾರ್ಥ ಪ್ರೀತಿ ಕಾಣುವುದು ಪ್ರಾಣಿಗಳಲ್ಲಿ. ಅಂತಹ ಪ್ರೀತಿಯನ್ನು 'ನಾನು ಮತ್ತು ಗುಂಡ' ಚಿತ್ರದಲ್ಲಿ ತೋರಿಸಲಾಗಿದೆ. ದಯವಿಟ್ಟು ಎಲ್ಲರೂ ಬಂದು ಥೀಯೇಟರ್ನಲ್ಲಿ ನೋಡಿ ಚಿತ್ರವನ್ನು ಹರಸಿ ಎಂದು ಮನವಿ ಮಾಡಿದರು.
ಇನ್ನು ಸಿನಿಮಾ ನೋಡಿದ ನಿಖಿಲ್ ಕುಮಾರಸ್ವಾಮಿ, ಶಿವು ಕೆ.ಆರ್. ಪೇಟೆ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದರು. ಚಿತ್ರದಲ್ಲಿ ಶ್ವಾನ ಮತ್ತು ಮಾನವನ ನಡುವಿನ ಬಾಂಧವ್ಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಕಿರುತೆರೆಯಲ್ಲಿ ಬರುತ್ತದೆ, ಅಮೇಜಾನ್ ಪ್ರೈಮ್ನಲ್ಲಿ ಬರುತ್ತದೆ ಎಂದು ಕಾಯುವುದನ್ನು ಬಿಟ್ಟು ದಯವಿಟ್ಟು ಥಿಯೇಟರ್ಗೆ ಬಂದು ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. ರಘು ಹಾಸನ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ನಾನು ಮತ್ತು ಗುಂಡ' ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ ಆಟೋ ಡ್ರೈವರ್ ಶಂಕ್ರನ ಪಾತ್ರದಲ್ಲಿ ಅಭಿನಯಿಸಿದ್ದರೆ ಶಂಕ್ರನ ಪತ್ನಿಯಾಗಿ ಸಂಯುಕ್ತ ಹೊರನಾಡು ನಟಿಸಿದ್ದಾರೆ. ಗುಂಡನ ಪಾತ್ರದಲ್ಲಿ 'ಸಿಂಬ' ಎಂಬ ಶ್ವಾನ ಬಹಳ ಅದ್ಭುತವಾಗಿ ನಟಿಸಿದೆ. ಒಟ್ಟಿನಲ್ಲಿ ಚಿತ್ರ ನೋಡಿದ ಪ್ರತಿಯೊಬ್ಬರೂ ಗುಂಡ ಹಾಗೂ ಶಂಕ್ರನ ಬಗ್ಗೆ ಮಾತನಾಡಿದ್ದಾರೆ.