ಸಿನಿಮಾ ಎಂಬ ಬಣ್ಣದ ಪ್ರಪಂಚದಲ್ಲಿ ಅದೃಷ್ಟದ ಜೊತೆಗೆ ಟ್ಯಾಲೆಂಟ್ ಇದ್ದರೆ ರಾತ್ರೋ ರಾತ್ರಿ ಸೆಲಬ್ರಿಟಿ ಆಗಬಹುದು. ಅದಕ್ಕೆ ತಾಜಾ ಉದಾಹರಣೆಯಾಗಿ ಕಾಮಿಡಿ ನಟರು ಕನ್ನಡ ಚಿತ್ರರಂಗದ ಬೆಳ್ಳಿ ಪರದೆ ಮೇಲೆ ನಕ್ಷತ್ರಗಳಂತೆ ಮಿನುಗುತ್ತಿರುವುದು. ಸ್ಯಾಂಡಲ್ವುಡ್ನಲ್ಲಿ ಕಾಮಿಡಿ ಮಾಡ್ತಾ, ನಂತರ ಬೇಡಿಕೆಯ ಹೀರೋ ಆದ ಟ್ರೆಂಡ್ ಡಾ. ರಾಜ್ ಕುಮಾರ್ ಕಾಲದಿಂದಲೂ ಇದೆ.
ಒಂದು ಚಿತ್ರದಲ್ಲಿ ವಿಲನ್ ಅಥವಾ ಕಾಮಿಡಿ ನಟನಾಗಿ ಕಾಣಿಸಿಕೊಂಡರೆ ಮತ್ತೆ ಆ ಇಮೇಜ್ನಿಂದ ಹೊರಬರಲಾಗದಂಥ ಪರಿಸ್ಥಿತಿ ಹಿಂದೆ ಇತ್ತು. ಆದರೆ ಈಗ ಕಾಮಿಡಿ ನಟರು ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ನಾಯಕರಾಗಿ ಹೊರ ಹೊಮ್ಮಿದ್ದಾರೆ.
ಅಂತಹ ಕಾಮಿಡಿ ನಟರಲ್ಲಿ ಮೊದಲಿಗೆ ಕರ್ನಾಟಕದ ಕುಳ್ಳ ದ್ವಾರಕೀಶ್ ನೆನಪಾಗುತ್ತಾರೆ. 1969ರಲ್ಲಿ ಬಿಡುಗಡೆಯಾದ ಡಾ. ರಾಜ್ ಕುಮಾರ್ ಅಭಿನಯದ 'ಮೇಯರ್ ಮುತ್ತಣ್ಣ' ಚಿತ್ರದಲ್ಲಿ ದ್ವಾರಕೀಶ್ ಹಾಸ್ಯ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದರು. ಈ ಸಿನಿಮಾ ನಂತರ ಹಲವು ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಗಮನ ಸೆಳೆದ ದ್ವಾರಕೀಶ್, 1972 'ಕುಳ್ಳ ಏಜೆಂಟ್ 000' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನ ಪಟ್ಟ ಅಲಂಕರಿಸುತ್ತಾರೆ. ಈ ಚಿತ್ರ ಜನರ ಮೆಚ್ಚುಗೆ ಗಳಿಸಿದ ನಂತರ ಕಿಲಾಡಿ ಕಿಟ್ಟು, ಪೆದ್ದ ಗೆದ್ದ, ಪ್ರಚಂಡ ಕುಳ್ಳ, ಸಿಂಗಾಪುರದಲ್ಲಿ ರಾಜಾ ಕುಳ್ಳ ಹೀಗೆ ಹಲವು ಸಿನಿಮಾಗಳ ಮೂಲಕ ದ್ವಾರಕೀಶ್ ಸಕ್ಸಸ್ ಹೀರೋ ಆಗಿ ಹೊರ ಹೊಮ್ಮಿದರು.
ಇನ್ನು ಕನ್ನಡ ಚಿತ್ರರಂಗದಲ್ಲಿ, ತನ್ನ ವಿಭಿನ್ನ ಮ್ಯಾನರಿಸಂನಿಂದ ಕಾಮಿಡಿ ನಟನಾಗಿ, ಖಳ ನಾಯಕನಾಗಿ ಮಿಂಚಿದ ನಟ ಜಗ್ಗೇಶ್. ಪಂಚಿಂಗ್ ಡೈಲಾಗನ್ನೇ ಬಂಡವಾಳ ಮಾಡಿಕೊಂಡ ಜಗ್ಗೇಶ್ ಇಂದು ಭಾರತೀಯ ಚಿತ್ರರಂಗದಲ್ಲಿ ನವರಸ ತುಂಬಿರುವ ನಾಯಕ ನಟ ಎಂದೇ ಕರೆಸಿಕೊಂಡಿದ್ದಾರೆ. ಜಗ್ಗೇಶ್ ಅಭಿನಯದ ಮೊದಲ ಚಿತ್ರ 'ಇಬ್ಬನಿ ಕರಗಿತು'. ಈ ಚಿತ್ರದಲ್ಲಿ ಜಗ್ಗೇಶ್ ಸೈಡ್ ಕಾಮಿಡಿಯನ್ ಆಗಿ ನಟಿಸಿದ್ದರು. ರಣಧೀರ, ರಣರಂಗ, ರಾಣಿ ಮಹಾರಾಣಿ, ಪೋಲಿ ಹುಡುಗ ಹೀಗೆ ಹಲವಾರು ಚಿತ್ರಗಳಲ್ಲಿ ಹಾಸ್ಯ ಹಾಗೂ ಖಳನಟನಾಗಿ ಕಾಣಿಸಿಕೊಂಡರು. ಆದರೆ ಜಗ್ಗೇಶ್ ಪೂರ್ಣ ಪ್ರಮಾಣದ ಹೀರೋ ಆಗಿದ್ದು, ಉಪೇಂದ್ರ ನಿರ್ದೇಶನದ 'ತರ್ಲೆ ನನ್ ಮಗ' ಚಿತ್ರದಿಂದ.
ಈ ಚಿತ್ರ ಡಬ್ಬಲ್ ಮೀನಿಂಗ್ ಇದ್ದ ಕಾರಣ, ಫ್ಯಾಮಿಲಿ ಆಡಿಯನ್ಸ್ ಮುಟ್ಟಲು ಬಹಳ ಕಷ್ಟ ಆಯ್ತು. ಈ ಚಿತ್ರದ ನಂತರ ಕನ್ನಡ ಪ್ರೇಕ್ಷಕರ ಹೃದಯ ಕದ್ದಿದ್ದು 'ಭಂಡ ನನ್ನ ಗಂಡ' ಸಿನಿಮಾ. ಈ ಚಿತ್ರ ಜಗ್ಗೇಶ್ ಹಣೆ ಬರಹವನ್ನೇ ಬದಲಾಯಿಸಿತು. ಕಾಮಿಡಿ ನಟನಾಗಿದ್ದ ಜಗ್ಗೇಶ್ ಬೇಡಿಕೆ ಹೀರೋ ಆಗಿ ಬೆಳೆದರು. ಅದಕ್ಕೆ ಬೇವು ಬೆಲ್ಲ, ಸರ್ವರ್ ಸೋಮಣ್ಣ, ಸೂಪರ್ ನನ್ ಮಗ, ರಂಗಣ್ಣ, ಬಲ್ ನನ್ ಮಗ, ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ, ಮೇಕಪ್, ಹಲವಾರು ಸಿನಿಮಾಗಳೇ ಸಾಕ್ಷಿ. ಈಗ ಜಗ್ಗೇಶ್ ಸ್ಟಾರ್ ನಟರ ಮಟ್ಟಿಗೆ ಬೆಳೆದಿರುವುದು ಇತಿಹಾಸ.
ಜಗ್ಗೇಶ್ ರೀತಿ ಒಂದು ಗುರಿ ಇಟ್ಟುಕೊಂಡು ಬಂದ ಕಾಮಿಡಿ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಒಬ್ಬರು. ಟಿವಿ ಶೋಗಳಲ್ಲಿ ಕಾಮಿಡಿ ಮಾಡುತ್ತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 'ಠಪೋರಿ' ಎಂಬ ಸಿನಿಮಾದಲ್ಲಿ ಖಳನಟನಾಗಿ ನಟಿಸುವ ಮೂಲಕ. ನಂತರ ಬಂದ ಅಬ್ಬಬ್ಬಾ ಎಂಥ ಹುಡುಗ, ಬಾ ಬಾರೋ ರಸಿಕ, ಅಹಂ ಪ್ರೇಮಾಸ್ಮಿ, ಹೀಗೆ ಹಲವಾರು ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸುತ್ತಿದ್ದ ಗಣೇಶ್ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಿದ್ದು 'ಚೆಲ್ಲಾಟ' ಚಿತ್ರದ ಮೂಲಕ.
ಆದರೆ ಗಣೇಶ್ಗೆ ಸ್ಟಾರ್ ಇಮೇಜ್ ತಂದುಕೊಟ್ಟದ್ದು 'ಮುಂಗಾರು ಮಳೆ ' ಸಿನಿಮಾ. ಈ ಸಿನಿಮಾ ಗಣೇಶ್ಗೆ ರಾತ್ರೋ ರಾತ್ರಿ ಸ್ಟಾರ್ ಗಿರಿ ತಂದು ಕೊಡ್ತು. ಒಂದು ವರ್ಷ ಈ ಸಿನಿಮಾ ಪ್ರದರ್ಶನಗೊಳ್ಳುವ ಮೂಲಕ ಗಣೇಶ್ ಸಿನಿಮಾ ಕರಿಯರ್ಗೆ ಹೊಸ ತಿರುವು ನೀಡಿತ್ತು. ಈ ಚಿತ್ರದ ನಂತರ ಬಂದ ಗಾಳಿಪಟ, ಹುಡುಗಾಟ ಚಿತ್ರ ಗಣೇಶ್ ಅವರನ್ನು ಗೋಲ್ಡನ್ ಸ್ಟಾರ್ ಆಗಿ ಮಾಡಿತ್ತು. ಅಂದಿನಿಂದ ಹಿಡಿದು ಮೊನ್ನೆ ರಿಲೀಸ್ ಆದ 99 ಸಿನಿಮಾವರೆಗೂ ಗಣೇಶ್ , ಕನ್ನಡ ಚಿತ್ರರಂಗದಲ್ಲಿ 16 ವರ್ಷಗಳಿಂದ ಸ್ಟಾರ್ ಪಟ್ಟವನ್ನು ಉಳಿಸಿಕೊಂಡು ಬಂದಿದ್ದಾರೆ.
ಅದೇ ರೀತಿ ನವರಸ ನಾಯಕ ಜಗ್ಗೇಶ್ ಹಾದಿಯನ್ನು ಅನುಸರಿಸಿದ ನಟ ಕೋಮಲ್. ಅಣ್ಣ ಜಗ್ಗೇಶ್, ವಿಷ್ಣುವರ್ಧನ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಮಿಡಿ ಕಿಕ್ ನೀಡುತ್ತಿದ್ದ ಕೋಮಲ್ ಹೀರೋ ಆಗಿದ್ದು ಒಂದು ಸಾಹಸ. ಬಹಳಷ್ಟು ಸಿನಿಮಾಗಳಲ್ಲಿ ಕಾಮಿಡಿ ಪಾತ್ರ ಮಾಡಿರುವ ಕೋಮಲ್ 'ಮಿಸ್ಟರ್ ಗರಗಸ' ಚಿತ್ರದ ಮೂಲಕ ಹೀರೋ ಆದರು. ಆದರೆ ಈ ಸಿನಿಮಾ ಕೋಮಲ್ ಕೈ ಹಿಡಿಯಲಿಲ್ಲ. ನಂತರ 'ಚಮ್ಕಾಯ್ಸಿ ಚಿಂದಿ ಉಡಾಯಿಸಿ' ಚಿತ್ರದಲ್ಲಿ ಹೀರೋ ಆಗಿ ನಟಿಸಿದರೂ ಈ ಚಿತ್ರ ಕೂಡಾ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣಲಿಲ್ಲ.
ಹೀರೋ ಅಂದ್ರೆ ಹೀಗೆ ಇರಬೇಕು ಎಂಬ ಮಡಿವಂತಿಕೆ ಇದ್ದ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಕಥೆ ಇದ್ದರೆ, ಯಾರು ಬೇಕಾದರೂ ಹೀರೋ ಆಗಬಹುದು ಎಂದು ತೋರಿಸಿಕೊಟ್ಟ ಸಿನಿಮಾ ಕೋಮಲ್ ಅಭಿನಯದ 'ಗೋವಿಂದಾಯ ನಮಃ'. ಈ ಸಿನಿಮಾ ಕೋಮಲ್ ಕಾಮಿಡಿ ಇಮೇಜನ್ನು ಬದಲಾಯಿಸಿ ಹೀರೋ ಲುಕ್ ಕೊಡ್ತು. ಅಲ್ಲಿಂದ ಮರ್ಯಾದೆ ರಾಮಣ್ಣ,ರಾಧನ ಗಂಡ, ನಮೋ ಭೂತಾತ್ಮ ಚಿತ್ರದಿಂದ ಹಿಡಿದು, ಕೆಂಪೇಗೌಡ 2 ಚಿತ್ರಕ್ಕಾಗಿ ಸಣ್ಣ ಆಗಿ ಖಡಕ್ ಪೊಲೀಸ್ ಆಫೀಸರ್ ಆಗಿ ಕೋಮಲ್ ಅಬ್ಬರಿಸಿದ್ರು.
ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ಕಾಮಿಡಿ ಮಾಡಿದ್ದ ನಟ ಶರಣ್. ನೂರು ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ನಕ್ಕು ನಲಿಸಿದ ಶರಣ್ ರ್ಯಾಂಬೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟರು. ಅಂದು ಕೊಂಡಂತೆ ಈ ಸಿನಿಮಾ ಸಕ್ಸಸ್ ಆಗುವ ಮೂಲಕ ಶರಣ್ ಕೂಡಾ ನಾಯಕನ ಪಟ್ಟ ಅಲಂಕರಿಸಿದರು. ಈ ಚಿತ್ರದ ನಂತರ ವಿಕ್ಟರಿ, ಅಧ್ಯಕ್ಷ, ರಾಜ ರಾಜೇಂದ್ರ, ಜಯಲಲಿತ, ರ್ಯಾಂಬೋ 2, ವಿಕ್ಟರಿ 2 ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್ವುಡ್ ಪೈಸಾ ವಸೂಲ್ ಹೀರೋ ಅಂತ ಕರೆಸಿಕೊಂಡಿದ್ದಾರೆ ಶರಣ್.
ಶರಣ್ ಅವರಂತೆ ಕನ್ನಡದ, ಎಲ್ಲಾ ನಟರ ಜೊತೆ ಕಾಮಿಡಿ ಕಚಗುಳಿ ಇಡುತ್ತಿರುವ ನಟ ಚಿಕ್ಕಣ್ಣ. ಅಧ್ಯಕ್ಷ ಚಿತ್ರದಲ್ಲಿ ನಾಯಕನಿಗಿರುವಷ್ಟೇ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ಅವರು ಮಿಂಚಿದರು. ಜೊತೆಗೆ ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ಸಖತ್ತಾಗೆ ವರ್ಕ್ ಔಟ್ ಆಗಿತ್ತು. ಈಗ ಚಿಕ್ಕಣ್ಣ ಹೀರೋ ಆಗಲು ಸಜ್ಜಾಗುತ್ತಿದ್ದಾರೆ. ಈ ಎಲ್ಲಾ ನಟರಂತೆ ಚಿಕ್ಕಣ್ಣ ಕೂಡಾ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕು.