2021 ಸ್ಯಾಂಡಲ್ವುಡ್ ಪಾಲಿಗೆ ಕರಾಳ ವರ್ಷ. ಯಾಕೆಂದ್ರೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್, ಹಿರಿಯ ನಟ ಶಿವರಾಮ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಕಲಾವಿದರನ್ನು ಕಳೆದುಕೊಂಡಿದ್ದೇವೆ. ಇದೀಗ 80, 90ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಕೆ.ವಿ.ರಾಜು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಕೆ.ವಿ.ರಾಜು ಕೊನೆಯುಸಿರೆಳೆದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. 'ಬೆಳ್ಳಿ ಕಾಲುಂಗುರ', 'ಹುಲಿಯಾ', 'ನವಭಾರತ','ಪೊಲೀಸ್ ಲಾಕಪ್’, 'ಬೊಂಬಾಟ್ ಹುಡುಗ','ಬೆಳ್ಳಿ ಮೋಡಗಳು', 'ಯುದ್ಧಕಾಂಡ','ರಾಷ್ಟ್ರಗೀತೆ', 'ಸುಂದರಕಾಂಡ’ ಸೇರಿದಂತೆ ಹಲವು ಸಿನಿಮಾಗಳನ್ನು ಕೆ.ವಿ.ರಾಜು ನಿರ್ದೇಶನ ಮಾಡಿದ್ದರು. ಕನ್ನಡ ಮಾತ್ರವಲ್ಲದೆ ಬಾಲಿವುಡ್ನಲ್ಲಿಯೂ ಕೆ.ವಿ.ರಾಜು ತಮ್ಮ ಛಾಪನ್ನು ಮೂಡಿಸಿದ್ದರು.
ಹಿಂದಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ 'ಇಂದ್ರಜಿತ್' ಚಿತ್ರಕ್ಕೆ ಕೆ.ವಿ.ರಾಜು ಆ್ಯಕ್ಷನ್-ಕಟ್ ಹೇಳಿದ್ದರು. ರವಿಚಂದ್ರನ್, ಶಿವರಾಜ್ ಕುಮಾರ್, ದೇವರಾಜ್, ಸಾಯಿಕುಮಾರ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳನ್ನ ಕೆ.ವಿ ರಾಜು ನಿರ್ದೇಶನ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ವಿ ರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ದುತ್ತಿದ್ದ ಮಾರ್ಗ ಮಧ್ಯೆ ಇಂದು ಇಹಲೋಕ ತ್ಯಜಿಸಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.