ಕನ್ನಡ ಚಿತ್ರ ನಿರ್ದೇಶಕ ಹಾಗು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಜಿ.ಮೂರ್ತಿ (56) ಇಂದು ವಿಧಿವಶರಾಗಿದ್ದಾರೆ. ಮನೆಯಲ್ಲಿ ಕಾಲು ಜಾರಿ ಬಿದ್ದ ಕಾರಣ ತಲೆಗೆ ಬಲವಾದ ಪೆಟ್ಟುಬಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಬ್ರೈನ್ ಹ್ಯಾಮರೇಜ್ನಿಂದಾಗಿ ಇಹಲೋಕ ತ್ಯಜಿಸಿದ್ದಾರೆ.
ಇವರು ಹಿರಿಯ ಚಿತ್ರನಿರ್ದೇಶಕ ಜಿ.ವಿ.ಅಯ್ಯರ್ ಅವರ ನಿಕಟವರ್ತಿಯಾಗಿದ್ದರು. ಅಯ್ಯರ್ ಅವರ ಸಿನಿಮಾಗಳಿಗೆ ಕಲಾನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಪಿ.ಕೃಷ್ಣಮೂರ್ತಿ ಅವರಿಗೆ ಸಹಾಯಕರಾಗಿ ಮೂರ್ತಿಯವರು ವೃತ್ತಿ ಆರಂಭಿಸಿದ್ದರು. ಮುಂದೆ ಸ್ವತಂತ್ರ ನಿರ್ದೇಶಕರಾಗಿ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. ‘ಚಂದ್ರಚಕೋರಿ’ ಮತ್ತು ‘ಕುರುನಾಡು’ ಚಿತ್ರಗಳ ಅತ್ಯುತ್ತಮ ಕಲಾನಿರ್ದೇಶನಕ್ಕಾಗಿ ಅವರಿಗೆ ರಾಜ್ಯಪ್ರಶಸ್ತಿ ಸಂದಿದೆ. ಇನ್ನು ‘ಕುರುನಾಡು’ ಚಿತ್ರಕ್ಕೆ ಸ್ವತಃ ಮೂರ್ತಿಯವರೇ ಆಕ್ಷನ್ ಕಟ್ ಹೇಳಿದ್ದರು.
ಅವರ ನಿರ್ದೇಶನದ ‘ಶಂಕರ ಪುಣ್ಯಕೋಟಿ’ ಚಿತ್ರಕ್ಕೆ ಮೂರನೇ 'ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ರಾಜ್ಯಪ್ರಶಸ್ತಿ (2008-09) ದೊರೆತಿದೆ. ವೈಷ್ಣವಿ, ಹಳ್ಳಿಯ ಮಕ್ಕಳು, ಅರಳುವ ಹೂಗಳು, ಸಿದ್ದಗಂಗ, ಸುಗಂಧಿ ಸೇರಿದಂತೆ ಒಟ್ಟು ಎಂಟು ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.
ನಟ ಶ್ರೀನಿವಾಸ ಪ್ರಭು ಅವರ ಜೊತೆಗೂಡಿ ‘ಬಿಂಬ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದರು. ಒಂದೇ ಶಾಟ್ನಲ್ಲಿ ಒಬ್ಬನೇ ಕಲಾವಿದ ಅಭಿನಯಿಸಿದ್ದ ಜಗತ್ತಿನ ಮೊದಲ ಚಿತ್ರವಾಗಿ ಇದು ದಾಖಲಾಗಿದೆ. ಜಿ.ಮೂರ್ತಿ ನಿರ್ದೇಶನದ ಸಿನಿಮಾಗಳು ದೇಶ, ವಿದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ.