ಬಣ್ಣದ ಲೋಕದಲ್ಲಿ ಜೀವಿಸುತ್ತಿರುವ ಪ್ರೇಮಲೋಕದ ಈ ರಣಧೀರ ಸೋಲು-ಗೆಲುವನ್ನು ಸಮನಾಗಿ ಕಂಡವರು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎಲ್ಲರಿಗೂ ಆದರ್ಶಪ್ರಾಯವಾದವರು. ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸಿನಿ ಕರಿಯರ್ನ ಏಳುಬೀಳಿನ ಪ್ರಸಂಗವೊಂದನ್ನು ಹಾಸ್ಯನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಬಿಚ್ಚಿಟ್ಟಿದ್ದಾರೆ.
ರವಿ ಚಂದ್ರನ್, 1991ರಲ್ಲಿ 15 ಕೋಟಿ ಖರ್ಚು ಮಾಡಿ, ನಾಲ್ಕು ಭಾಷೆಗಳಲ್ಲಿ ಶಾಂತಿ-ಕ್ರಾಂತಿ ಸಿನಿಮಾ ಮಾಡಿದ್ದರು. ಕನ್ನಡದ ಆ ಚಿತ್ರದಲ್ಲಿ ಸ್ವತಃ ತಾವೇ ನಟಿಸಿ, ನಿರ್ಮಿಸಿದ್ದರು. ದೊಡ್ಡ ಬಜೆಟ್ನ ಈ ಚಿತ್ರ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆ ಪಡೆದರೂ ಹಣ ಗಳಿಸುವಲ್ಲಿ ವಿಫಲವಾಗಿತ್ತು. ಇದರಿಂದ ರವಿಚಂದ್ರನ್ ಅವರಿಗೆ ಭಾರಿ ಹೊಡೆತ ಬಿದ್ದಿತ್ತು. ಪ್ರೇಮಲೋಕ ಚಿತ್ರದಿಂದ ಗಳಿಸಿದ ಹಣವೆಲ್ಲ ಶಾಂತಿ-ಕ್ರಾಂತಿ ನುಂಗಿ ಬಿಟ್ಟಿತ್ತು. ಈ ವೇಳೆ ರವಿಚಂದ್ರನ್ ಕೈಯಲ್ಲಿ ಬಿಡಿಗಾಸು ಸಹ ಇರಲಿಲ್ಲವಂತೆ.
ಕೈ ಹಿಡಿದು ಮೇಲೆತ್ತಿದ ರಾಮಾಚಾರಿ:
ಶಾಂತಿ-ಕ್ರಾಂತಿ ಸೋಲಿನ ನೋವನ್ನು ಮರೆಸಿದ್ದು ರಾಮಾಚಾರಿ ಚಿತ್ರ. ಶಾಂತಿ-ಕ್ರಾಂತಿ ಸಿನಿಮಾದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ರವಿಚಂದ್ರನ್ ಬರೀ 30 ಲಕ್ಷದಲ್ಲಿ ರಾಮಾಚಾರಿ ಸಿನಿಮಾ ಮಾಡಿದ್ದರು. ತಮಿಳಿನ ಪಿ.ವಾಸು ಅವರ 'ಚಿನ್ನತಂಬಿ' ಚಿತ್ರವನ್ನು ಕನ್ನಡಕ್ಕೆ ತಂದು ದೊಡ್ಡ ಹಿಟ್ ಮಾಡಿದ್ದರು. ಈ ಚಿತ್ರದ ರೈಟ್ಸ್ ತರುವಲ್ಲಿ ರವಿಚಂದ್ರನ್ ಅವರಿಗೆ ಸಹಾಯ ಮಾಡಿದ್ದು, ನಟಿ ಖುಷ್ಬು ಅವರಂತೆ.
- " class="align-text-top noRightClick twitterSection" data="">
ಈ ರೋಚಕ ಕಹಾನಿಯನ್ನು 'ಕನ್ನಡದ ಕೋಗಿಲೆ' ಶೋನಲ್ಲಿ ಸಾಧು ಕೋಕಿಲಾ ಅವರು ಮೆಲುಕು ಹಾಕಿದ್ದಾರೆ. ಚಿನ್ನತಂಬಿ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಅವುಗಳನ್ನು ಮೀರಿಸುವಂತ ಹಾಡುಗಳು ರಾಮಾಚಾರಿಯಲ್ಲಿ ಬಂದವು. ರಿಮೇಕ್ ಚಿತ್ರವಾದರೂ ನಮ್ಮ ಶೈಲಿಗೆ ತಕ್ಕಹಾಗೆ ಹೊರಬರುವಂತೆ ಮಾಡಿ, ಗೆಲುವು ಪಡೆದವರು ರವಿಚಂದ್ರನ್. ಆರ್ಥಿಕವಾಗಿಯೂ ಸಹ ಈ ಚಿತ್ರ ಕ್ರೇಜಿಸ್ಟಾರ್ ಕೈಹಿಡಿದಿತ್ತು.
ಅಂದು ಒಂದೇ ದಿನ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದ ಮಾಲಾಶ್ರೀಯವರು ರಾಮಾಚಾರಿ ಚಿತ್ರಕ್ಕೆ ಕಷ್ಟಪಟ್ಟು ಡೇಟ್ ಕೊಟ್ಟಿದ್ದರು. ಸತತ 18 ದಿನಗಳವರೆಗೆ ಶೂಟಿಂಗ್ ನಡೆಸಿ, ಚಿತ್ರವನ್ನು ಸಿದ್ಧಪಡಿಸಿ ದೊಡ್ಡ ಜಯ ಪಡಿದ್ದರು ರವಿಮಾಮ. ಈ ಗತ್ತು, ಸ್ಥೈರ್ಯ ರವಿಚಂದ್ರನ್ ಅವರಿಗೆ ಮಾತ್ರ ಬರುತ್ತೆ ಎನ್ನುತ್ತಾರೆ ಹಿರಿಯ ನಟ ಸಾಧು.