ಐದು ವರ್ಷಗಳ ಹಿಂದೆ ಬಿಡುಗಡೆಯಾದ "ಸ" ಎಂಬ ಚಿತ್ರದ ನಂತರ ಹೇಮಂತ್ ಹೆಗಡೆ ಸುದ್ದಿಯೇ ಇರಲಿಲ್ಲ. ಹಾಗೆಲ್ಲ ಸುಮ್ಮನೆ ಕೂರದ ಮತ್ತು ಏನಾದರೊಂದು ಸಿನಿಮಾ ಕೆಲಸದಲ್ಲಿ ನಿರತರಾಗಿರುವ ಹೇಮಂತ್, ಈ ಸಮಯದಲ್ಲಿ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ಬಗ್ಗೆ ಹೆಚ್ಚು ಸುದ್ದಿಯಾಗಿಲ್ಲ.
ಇದೀಗ, ಹೇಮಂತ್ ಹೆಗಡೆ ಒಂದು ಕಾಮಿಡಿ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಹೇಮಂತ್ ಕಾಮಿಡಿ ಚಿತ್ರಗಳಿಗೆ ಜನಪ್ರಿಯರು. "ಸ" ಚಿತ್ರಕ್ಕೂ ಮುನ್ನ ಅವರು "ನಿಂಬೆಹುಳಿ" ಮತ್ತು "ಹೌಸ್ಫುಲ್" ಚಿತ್ರಗಳನ್ನು ನಿರ್ದೇಶಿಸಿದ್ದರು. ಹಿಂದಿಯಲ್ಲೂ ಅವರು ಕಾಮಿಡಿ ಸ್ಕ್ರಿಪ್ಟ್ಗಳನ್ನು ಮಾಡಿಟ್ಟುಕೊಂಡಿದ್ದರು. ಈಗ ಅವರು ಇನ್ನೊಂದು ಕಾಮಿಡಿ ಚಿತ್ರವನ್ನು ನಿರ್ದೇಶಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಈಗಾಗಲೇ ಫ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಲಾಕ್ಡೌನ್ ಮುಗಿದು ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಕೊಡುತ್ತಿದ್ದಂತೆಯೇ ಚಿತ್ರ ಪ್ರಾರಂಭಿಸಲಿದ್ದಾರಂತೆ.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜತೆಗೆ ಅವರು ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ.
ಮಲೆನಾಡಿನಲ್ಲಿ ಸಾಗುವ ಈ ಕಥೆಯಲ್ಲಿ ಹೇಮಂತ್ ಜೊತೆಗೆ ಪದ್ಮಜಾ ರಾವ್, ರಮೇಶ್ ಭಟ್, ಶರತ್ ಲೋಹಿತಾಶ್ವ ಮುಂತಾದವರು ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಿಂದಿಯ ಖತ್ರೋಂ ಕೆ ಕಿಲಾಡಿ ಮತ್ತು ಬಿಗ್ ಬಾಸ್ನಲ್ಲಿ ಕಾಣಿಸಿಕೊಂಡಿದ್ದ ಲೋಪಮುದ್ರಾ ರೌತ್, ಈ ಚಿತ್ರದಲ್ಲಿ ನಾಯಕಿಯಾಗುವ ಸಾಧ್ಯತೆ ಇದೆಯಂತೆ. ಈ ಚಿತ್ರದ ಅಧಿಕೃತ ಪ್ರಕಟಣೆ ಜೂನ್ 23ರಂದು ಹೊರಬೀಳುವ ಸಾಧ್ಯತೆ ಇದೆ.