ಮಂಗಳೂರು: ದಶಕಗಳ ಹಿಂದೆ 'ಮುಂಗಾರು ಮಳೆ' ಸಿನಿಮಾವನ್ನು ಸ್ಯಾಂಡಲ್ವುಡ್ಗೆ ನೀಡಿ ಇತಿಹಾಸ ಸೃಷ್ಟಿಸಿದ್ದ ಯೋಗರಾಜ್ ಭಟ್ 'ಪಂಚತಂತ್ರ' ಸಿನಿಮಾವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಕ್ರೀಡಾ ಚಿತ್ರವಾಗಿ ನಿರ್ಮಿಸಿ ಚಿತ್ರರಸಿಕರಿಗೆ ಉಣಬಡಿಸುತ್ತಿದ್ದಾರೆ.
'ಪಂಚತಂತ್ರ' ಸಿನಿಮಾ ಮಾರ್ಚ್ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಟ್ರೇಲರನ್ನು ಇಂದು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆ ಮಾಡಲಾಯಿತು.
ಮೂಲತಃ ಕರಾವಳಿಯವರೇ ಆಗಿರುವ ಯೋಗರಾಜ್ ಭಟ್ ಅವರು ಈ ಚಿತ್ರದ ಮೂಲಕ ಹಲವು ಮಂದಿ ಕರಾವಳಿಯವರನ್ನು ಪರಿಚಯಿಸಿದ್ದಾರೆ. ಈ ಕಾರಣದಿಂದಲೇ ಮಂಗಳೂರಿನಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
'ಪಂಚತಂತ್ರ' ಚಿತ್ರ ಯುವ ಪೀಳಿಗೆ ಮತ್ತು ವಯಸ್ಸಾದವರ ನಡುವಿನ ಚಕಮಕಿಗಳ ಸುತ್ತ ಸುತ್ತುತ್ತದೆ. ಈಗಿನ ಶರವೇಗದ ಯುವಪೀಳಿಗೆಯ ಮನಸ್ಸಿನ ಆಸೆ ಮತ್ತು ಭಾವನೆಗಳನ್ನು ಹೇಳುವ ಜೊತೆಗೆ ಪ್ರೀತಿ, ಸಂಬಂಧಗಳು ಮತ್ತು ಚುರುಕು ಮುಟ್ಟಿಸುವ ಹಾಸ್ಯ ಪ್ರಸಂಗಗಳ ಜೊತೆಗೆ ಎರಡು ಗುಂಪುಗಳ ನಡುವಿನ ಭೂ ವಿವಾದ ಈ ಎಲ್ಲಾ ಅಂಶಗಳು ಚಿತ್ರದಲ್ಲಿ ಅಡಗಿದೆ ಎಂದು ಯೋಗರಾಜ್ ಭಟ್ ಹೇಳುತ್ತಾರೆ.
ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಂತ ಅತಿ ದೊಡ್ಡ ಕಾರ್ ರೇಸ್ ಈ ಚಿತ್ರದಲ್ಲಿರುವುದರಿಂದ ಈ ಚಿತ್ರ ಸ್ಪೋರ್ಟ್ಸ್ ಫಿಲ್ಮ್ ಕೂಡಾ ಆಗಿದೆ. ಕನ್ನಡದಲ್ಲಿ ಈ ರೀತಿಯ ಚಿತ್ರ ತಯಾರಾಗಿರುವುದು ಇದೇ ಮೊದಲು. ಚಿತ್ರದಲ್ಲಿ ನಾಯಕನಾಗಿ ವಿಹಾನ್ ( ಕಾರ್ತಿಕ್), ನಾಯಕಿಯಾಗಿ ಸೋನಲ್, ಅಕ್ಷರ, ರಂಗಾಯಣ ರಘು, ಬಾಲರಜವಾಡಿ, ದೀಪಕ್ ಮೊದಲಾದವರು ನಟಿಸಿದ್ದಾರೆ.