ಮಂಜುಳ ಎಂದರೆ ನೆನಪಿಗೆ ಬರುವುದು ಬಜಾರಿ ಪಾತ್ರ. ಅದರಲ್ಲೂ 'ಸಂಪತ್ತಿಗೆ ಸವಾಲ್' ಚಿತ್ರದ ಅವರ ಡೈಲಾಗ್ಗಳು ಇಂದಿಗೂ ಬಹಳ ಫೇಮಸ್. ಇಂದಿನ ಪೀಳಿಗೆ ನಟಿಯರು ಕೂಡಾ ನಾನು ಮಂಜುಳ ನಟಿಸಿದಂತ ಪಾತ್ರದಲ್ಲಿ ನಟಿಸಬೇಕು ಎಂದು ಹೇಳುತ್ತಾರೆ. ಮಂಜುಳ ಅವರ ಕೀರ್ತಿ ಎಷ್ಟು ಎಂಬುದು ಈ ಒಂದು ಮಾತಿನಿಂದ ತಿಳಿಯುತ್ತದೆ.
![Manjula 34th Death Anniversary](https://etvbharatimages.akamaized.net/etvbharat/prod-images/manjula-color-1599878711949-3_1209email_1599878723_548.jpg)
1972 ರಿಂದ 1983 ರವರೆಗೆ ನಟಿ ಮಂಜುಳ ಅವರ ಗೋಲ್ಡನ್ ಪಿರಿಯಡ್ ಎನ್ನಬಹುದು. ಕನ್ನಡ, ತಮಿಳು ಹಾಗೂ ತೆಲುಗು ಸೇರಿ ಸುಮಾರು 102 ಸಿನಿಮಾಗಳಲ್ಲಿ ಮಂಜುಳ ನಟಿಸಿದ್ದಾರೆ. ಬಜಾರಿ ಪಾತ್ರ ಮಾತ್ರವಲ್ಲ, ಭಾವನಾತ್ಮಕ ಪಾತ್ರಗಳಲ್ಲೂ ಸೈ ಅನ್ನಿಸಿಕೊಂಡವರು ಮಂಜುಳ. 'ಸಂಪತ್ತಿಗೆ ಸವಾಲ್' ಚಿತ್ರದ ಬಜಾರಿ ಪಾತ್ರದಿಂದ 'ಸೀತಾರಾಮು' ಚಿತ್ರದ ಆ್ಯಕ್ಷನ್ ಪಾತ್ರದವರೆಗೂ ಮಿಂಚಿದ್ದ ಮಂಜುಳ ಕೊನೆಯ ದಿನಗಳಲ್ಲಿ ಬಹಳ ಕಷ್ಟ ಅನುಭವಿಸಿದ್ದರು ಎಂದು ತಿಳಿದವರು ಹೇಳುತ್ತಾರೆ.
![Manjula 34th Death Anniversary](https://etvbharatimages.akamaized.net/etvbharat/prod-images/manjula-kannada-actress1599878711950-67_1209email_1599878723_672.jpg)
ಬಹಳಷ್ಟು ಖ್ಯಾತಿ ಸಂಪಾದಿಸಿದ್ದ ಮಂಜುಳ ಕೊನೆಗೆ ಸಣ್ಣ ಪಾತ್ರಗಳನ್ನು ಒಪ್ಪಿಕೊಳ್ಳುವ ಪರಿಸ್ಥಿತಿಗೆ ಬಂದದ್ದು ಅವರಿಗೆ ಬಹಳ ದು:ಖ ತಂದಿತ್ತು. ಆರ್ಥಿಕವಾಗಿ ಕಷ್ಟ ಇದ್ದಿದ್ದರಿಂದ ಚೀಟಿ ವ್ಯವಹಾರಕ್ಕೂ ಕೈ ಹಾಕಿ ಬಹಳ ನಷ್ಟ ಅನುಭವಿಸಿದರು ಎಂದು ಆಪ್ತರು ಹೇಳಿದ್ದಾರೆ.
ನಿರ್ದೇಶಕ ಅಮೃತಮ್ ಅವರ ಕೈ ಹಿಡಿದ ಮಂಜುಳಾಗೆ ಅಭಿಷೇಕ್ ಎಂಬ ಪುತ್ರ ಇದ್ದಾರೆ. ಅಭಿಷೇಕ್ ಇಂದಿಗೂ ಅಮ್ಮನನ್ನು ನೆನೆದು ಜೀವನ ಸಾಗಿಸುತ್ತಿದ್ಧಾರೆ. ತುಮಕೂರಿನ ಬಳಿ ಹೊಂಗೇನಹಳ್ಳಿಯಲ್ಲಿ ಮಂಜುಳ ಅವರ ಸಮಾಧಿ ಇದೆ. ಸಮಾಧಿಗೆ ಕಾಂಪೌಂಡ್ ಇದ್ದು ಸುತ್ತಲೂ ಲೇ ಔಟ್ ಪ್ರಾರಂಭ ಆಗಿದೆ. ಈಗ ಒತ್ತುವರಿಯಿಂದ ಮಂಜುಳ ಸಮಾಧಿ ಉಳಿಯುವುದಾ ಇಲ್ಲವಾ ಎಂಬ ಅನುಮಾನ ಕಾಡತೊಡಗಿದೆ.
![Manjula 34th Death Anniversary](https://etvbharatimages.akamaized.net/etvbharat/prod-images/manjula-and-rajakumar1599878711956-8_1209email_1599878723_657.jpg)
ಮಂಜುಳ ಅವರ ಬಗ್ಗೆ ಮಾತನಾಡಿರುವ ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜು, ಮಂಜುಳ ಅವರಂತ ಮತ್ತೊಬ್ಬ ನಟಿ ಕನ್ನಡದಲ್ಲಿ ಇದುವರೆಗೂ ಹುಟ್ಟಲಿಲ್ಲ ಎನ್ನುತ್ತಾರೆ. ಬಿ.ಎಸ್. ಬಸವರಾಜು ಅವರ ಬಳಿ ಮಂಜುಳ ಅವರ ಅನೇಕ ಫೋಟೋಗಳ ಸಂಗ್ರಹಗಳಿವೆ. ಮಂಜುಳ ಕುರಿತಾದ ಕೆಲವೊಂದು ಆಸಕ್ತಿಕರ ವಿಚಾರ ಇಲ್ಲಿದೆ.
![Manjula 34th Death Anniversary](https://etvbharatimages.akamaized.net/etvbharat/prod-images/manjula-and-srinath1599878711957-96_1209email_1599878723_419.jpg)
1954 ನವೆಂಬರ್ 8 ರಂದು ಶಿವಣ್ಣ ಹಾಗೂ ದೇವಿರಮ್ಮ ದಂಪತಿಗೆ ಪುತ್ರಿಯಾಗಿ ಮಂಜುಳ ಜನಿಸಿದರು. ಮಂಜುಳ ಬಾಲಕಿ ಆಗಿದ್ದಾಗ ಇವರ ಹಸ್ತವನ್ನು ನೋಡಿದ ಜ್ಯೋತಿಷಿ ಶಿವಶಂಕರ್, ಈಕೆ ಉತ್ತಮ ಹೆಸರು ಮಾಡುತ್ತಾಳೆ, ಅದೇ ರೀತಿ ಜೀವನ ಬಹಳ ಕಷ್ಟ ಇದೆ ಎಂದು ಪೋಷಕರ ಬಳಿ ಹೇಳಿದ್ದರಂತೆ.
![Manjula 34th Death Anniversary](https://etvbharatimages.akamaized.net/etvbharat/prod-images/manjula-dance-11599878711958-41_1209email_1599878723_140.jpg)
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿವರೆಗೆ ಓದಿದ ಮಂಜುಳಾಗೆ ಬಾಲ್ಯದಿಂದಲೂ ನೃತ್ಯ ಹಾಗೂ ನಾಟಕಗಳಲ್ಲಿ ಬಹಳ ಆಸಕ್ತಿ. ಪ್ರಭಾತ್ ಕಲಾವಿದರ ತಂಡ ಸೇರಿದಾಗ ಮಂಜುಳ ಅವರ ಪ್ರತಿಭೆ ಬೆಳಕಿಗೆ ಬಂತು. ಇದರಿಂದ 'ಮನೆ ಕಟ್ಟಿ ನೋಡು' ಸಿನಿಮಾಗೆ ಆಫರ್ ಬಂತು. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಮಂಜುಳ ಭಾಗಿಯಾಗಿದ್ದರು. ಆ ದಿನ ಕ್ಯಾಮರಾದಲ್ಲಿ 150 ಅಡಿ ಫಿಲ್ಮ್ ರೋಲ್ ಇತ್ತು. ಆಶ್ಚರ್ಯ ಎನ್ನುವಂತೆ ಮಂಜುಳ ಒಂದೇ ಟೇಕ್ನಲ್ಲಿ ಎಲ್ಲರೂ ಬೆರಗಾಗುವಂತೆ ಡೈಲಾಗ್ ಹೇಳಿದ್ದರು.
![Manjula 34th Death Anniversary](https://etvbharatimages.akamaized.net/etvbharat/prod-images/manjula-in-sorrow-role-111599878711952-72_1209email_1599878723_425.jpg)
ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಜುಳ ಅಭಿನಯಿಸಿದ್ದ 'ಕರ್ನಾಟಕ ಸಾಮ್ರಾಜ್ಯ' ನಾಟಕ ನೋಡಿದ ಖ್ಯಾತ ನಿರ್ದೇಶಕ ಎಂ.ಆರ್. ವಿಠಲ್ 1972 ರಲ್ಲಿ 'ಯಾರ ಸಾಕ್ಷಿ' ಚಿತ್ರಕ್ಕೆ ಆಹ್ವಾನಿಸಿದರು. ಅಲ್ಲಿಂದ ಸುಮಾರು 1 ದಶಕಗಳ ಕಾಲ ಮಂಜುಳ ಕನ್ನಡ ಚಿತ್ರರಂಗದಲ್ಲಿ ಅದ್ಭುತ ನಟಿಯಾಗಿ ಮಿಂಚಿದರು.
![Manjula 34th Death Anniversary](https://etvbharatimages.akamaized.net/etvbharat/prod-images/manjula_51599878711952-39_1209email_1599878723_452.jpg)
ಮಂಜುಳ ಅಭಿನಯದ ಮೂರೂವರೆ ವಜ್ರಗಳು, ಭಕ್ತ ಕುಂಬಾರ, ಸಂಪತ್ತಿಗೆ ಸವಾಲ್, ಮಯೂರ, ದಾರಿ ತಪ್ಪಿದ ಮಗ, ಎರಡು ಕನಸು, ಶ್ರೀನಿವಾಸ ಕಲ್ಯಾಣ, ಗಲಾಟೆ ಸಂಸಾರ, ಪಾಯಿಂಟ್ ಪರಿಮಳ, ಸವತಿಯ ನೆರಳು, ಸೀತಾರಾಮು, ದೀಪ, ಮರೆಯಾದ ಹಾಡು, ಮರೆಯಲಾಗದ ಕಥೆ, ಕುಂಕುಮ ರಕ್ಷೆ, ನಿನಗಾಗಿ ನಾನು, ಶಿಕಾರಿ, ಸೊಸೆ ತಂದ ಸೌಭಾಗ್ಯ, ಮಿಥುನ, ಬೆಸುಗೆ, ಸಿಂಗಾಪುರದಲ್ಲಿ ರಾಜಾಕುಳ್ಳ, ಕಿಟ್ಟು ಪುಟ್ಟು, ತಾಯಿಗಿಂತ ದೇವರಿಲ್ಲ, ಎರಡು ಮುಖ, ಮನ ಗೆದ್ದ ಮಗ, ಪುಟಾಣಿ ಏಜೆಂಟ್ 123, ರಾಮ ಪರಶುರಾಮ, ಕೆಂಪು ಹೋರಿ ಸಿನಿಮಾಗಳಲ್ಲಿ ಅವರ ಕಲಾಕೌಶಲ್ಯವನ್ನು ಕಾಣಬಹುದು.
ಮಂಜುಳ ಅಭಿನಯಿಸಿದ 'ಮೋಹಿನಿ ಭಸ್ಮಾಸುರ' ನಾಟಕ ನೋಡಿ ಡಾ. ರಾಜ್ಕುಮಾರ್ ಇವರಿಗೆ 'ಮೂರೂವರೆ ವಜ್ರಗಳು' ಸಿನಿಮಾದಲ್ಲಿ ನಟಿಸಲು ಆಹ್ವಾನ ನೀಡಿದರು.
![Manjula 34th Death Anniversary](https://etvbharatimages.akamaized.net/etvbharat/prod-images/manjula-vishnu-and-dwarakish1599878711960-45_1209email_1599878723_1104.jpg)
ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್, ಶಂಕರ್ ನಾಗ್, ಶ್ರೀನಾಥ್, ಜೈ ಜಗದೀಶ್ ಸೇರಿದಂತೆ ಬಹುತೇಕ ಅಂದಿನ ಖ್ಯಾತ ನಟರೊಂದಿಗೆ ಮಂಜುಳ ನಟಿಸಿದ್ದಾರೆ. ಮಂಜುಳ ದೊಡ್ಡ ಹೆಸರು ಮಾಡಿದ್ದರೂ ಕೆಲವು ಹೊಸ ನಟರೊಂದಿಗೆ ಕೂಡಾ ನಾಯಕಿಯಾಗಿ ನಟಿಸಿದ್ದಾರೆ.
ಮಂಜುಳ ಹಾಗೂ ಶ್ರೀನಾಥ್ ಜೋಡಿ ಕೂಡಾ ಅಂದು ಬಹಳ ಜನಪ್ರಿಯ. ಇವರಿಬ್ಬರೂ ಪ್ರಭಾತ್ ಕಲಾವಿದರು ತಂಡದಲ್ಲಿರುವಾಗಲೇ ಒಳ್ಳೆ ಸ್ನೇಹಿತರು. ಮಂಜುಳ, ಪ್ರತಿಯೊಂದು ಪಾತ್ರಕ್ಕೆ ತೋರುತ್ತಾ ಇದ್ದ ಕಾಳಜಿ, ಸಂಭಾಷಣೆ ಬಗ್ಗೆ ಗಮನ ಹರಿಸುವ ರೀತಿಯೇ ಪ್ರೇಕ್ಷಕರು ಅವರನ್ನು ಮೆಚ್ಚಲು ಕಾರಣವಾಯ್ತು.
ಮಂಜುಳ ಅವರ ವೃತ್ತಿ ಜೀವನದಲ್ಲಿ 'ಸಂಪತ್ತಿಗೆ ಸವಾಲ್' ಹೇಗೆ ಟರ್ನಿಂಗ್ ಪಾಯಿಂಟ್ ಆಯಿತೋ ಅದೇ ರೀತಿ 'ಸೀತಾ ರಾಮು' ಅವರ ವೃತ್ತಿ ಬದುಕಿಗೆ ಮತ್ತೊಂದು ಮಜಲು ನೀಡಿತು.
![Manjula 34th Death Anniversary](https://etvbharatimages.akamaized.net/etvbharat/prod-images/besuge---srinath-and-manjula-11599878711963-2_1209email_1599878723_128.jpg)
ತುಮಕೂರಿನ ಶಿರಾ ಗೇಟ್ ಬಳಿ ಇರುವ ಹೊಂಗೇನಹಳ್ಳಿ ಬಳಿ ಒಂದು ಶಿವನ ದೇವಸ್ಥಾನವನ್ನು ಮಂಜುಳ 1977 ರಲ್ಲಿ ನಿರ್ಮಾಣ ಮಾಡಿದ್ದರು. ಈ ದೇವಸ್ಥಾನದ ಉದ್ಘಾಟನೆಗೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆಹ್ವಾನಿಸಿದ್ದರು.
![Manjula 34th Death Anniversary](https://etvbharatimages.akamaized.net/etvbharat/prod-images/eradu-kanasu-raj-and-manjula1599878711964-88_1209email_1599878723_961.jpg)
ಶಂಕರ್ನಾಗ್ ಕಾಲವಾಗಿ 30 ವರ್ಷಗಳಾದರೂ ಅವರು ಜನಮಾನಸದಲ್ಲಿ ಇಂದಿಗೂ ಹೇಗೆ ನೆಲೆಸಿದ್ದಾರೋ ಅದೇ ರೀತಿ ಮಂಜುಳ ಕೂಡಾ ಇಂದಿಗೂ ಬಹುತೇಕ ಕಲಾವಿದರ, ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾರೆ. 12 ಸೆಪ್ಟೆಂಬರ್ 1986 ರಲ್ಲಿ ಮಂಜುಳ ಅಡುಗೆ ಮಾಡುವಾಗ ಸ್ಟೌ ಸಿಡಿದು ನಿಧನರಾದರು.
![Manjula 34th Death Anniversary](https://etvbharatimages.akamaized.net/etvbharat/prod-images/seetha-ramu---manjula-and-shanker-nag1599878711965-29_1209email_1599878723_326.jpg)