ಕನ್ನಡ ಚಿತ್ರರಂಗದ ಪರಿಸ್ಥಿತಿ ಹದಗೆಟ್ಟಿದೆ. ಕನ್ನಡದಲ್ಲಿ ಕ್ವಾಲಿಟಿ ಸಿನಿಮಾಗಳು ಬರ್ತಾ ಇಲ್ಲ. ಇವತ್ತಿನ ದಿನಕ್ಕೆ ಕಥೆ ಅನ್ನೋದು ತುಂಬಾ ಮುಖ್ಯವಾಗುತ್ತಿದೆ. ಈಗಿನ ನಟರು ಕೂಡ ವೇಗವಾಗಿ ಬೆಳಯಬೇಕಿದೆ. ಅಲ್ಲದೆ ನವೆಂಬರ್ 1 ಬಂದ್ರೂ ಕೂಡ ಕನ್ನಡದ ಒಂದು ಸಿನಿಮಾ ರಿಲೀಸ್ ಆಗಿಲ್ಲ ಎಂದು ಹಿರಿಯ ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ರು.
'ದಾರಿ ತಪ್ಪಿದ ಮಗ' ಸಿನಿಮಾ ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗ್ತಾ ಇವೆ. ಆದ್ರೆ ನಿರ್ಮಾಪಕರು ಮಾತ್ರ ಉಳಿಯುತ್ತಿಲ್ಲ. ಯಾಕಂದ್ರೆ ಒಳ್ಳೆ ಕಥೆ ಇಲ್ಲದೆ, ಸುಮ್ನೇ ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಆ ಸಿನಿಮಾ 50 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಈ ಸಿನಿಮಾ 70 ಕೋಟಿ ಕಲೆಕ್ಷನ್ ಆಯಿತು ಅಂತಾ ಪ್ರಚಾರ ಮಾಡಲಾಗುತ್ತಿದೆ. ಇದೆಲ್ಲ ಬರೀ ಮಾಧ್ಯಮಗಳಲ್ಲಿ ಮಾತ್ರ ಎಂದು ರಾಜೇಂದ್ರ ಸಿಂಗ್ ಬಾಬು ನೇರವಾಗಿ ಆರೋಪ ಮಾಡಿದ್ರು.
ಡಾ. ರಾಜ್ಕುಮಾರ್ ವರ್ಷಕ್ಕೆ ಆರು ಸಿನಿಮಾಗಳನ್ನ ಮಾಡ್ತಾ ಇದ್ರು. ಆದ್ರೆ ಈಗಿನ ನಟರಲ್ಲಿ ಪ್ಲಾನಿಂಗ್ ಇಲ್ಲ. ಹೀಗಾಗಿ ಕನ್ನಡ ರಾಜ್ಯೋತ್ಸವಕ್ಕೆ ಒಂದು ಕನ್ನಡ ಸಿನಿಮಾ ರಿಲೀಸ್ ಆಗ್ತಾ ಇಲ್ಲ. ಕನ್ನಡ ಚಿತ್ರರಂಗ ಕಳೆದು ಹೋಗುತ್ತಿದೆ. ರಾಜ್ಕುಮಾರ್ ಹಾಕಿ ಕೊಟ್ಟಿರುವ ಅಡಿಪಾಯವನ್ನ ಉಳಿಸಿಕೊಳ್ಳಬೇಕಾಗಿದೆ ಎಂದು ಹಿರಿಯ ನಿರ್ದೇಶಕರು ನಟರಿಗೆ ಕಿವಿಮಾತು ಹೇಳಿದ್ರು.