ದೀಪಿಕಾ ಪಡುಕೋಣೆ ಅಭಿನಯದ ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ 'ಚಪಾಕ್' ನಾಳೆ ದೇಶಾದ್ಯಂತ ತೆರೆ ಕಾಣುತ್ತಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದ ಸಾಕಷ್ಟು ಕುತೂಹಲ ಹುಟ್ಟಿಹಾಕಿತ್ತು.
ಇನ್ನು ಎರಡು ದಿನಗಳ ಹಿಂದೆ ದೀಪಿಕಾ ಪಡುಕೋಣೆ ಜೆಎನ್ಯು ಕ್ಯಾಂಪಸ್ಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ಬೆನ್ನಲ್ಲೇ ಆಕೆಯ ಸಿನಿಮಾವನ್ನು ಬಹಿಷ್ಕರಿಸುವಂತೆ ಬಿಜೆಪಿ ನಾಯಕರು ಕರೆ ನೀಡಿದ್ದರು. ಇದಾದ ನಂತರ ಬುಕ್ ಮಾಡಿದ್ದ ಟಿಕೆಟನ್ನು ಲಕ್ಷಾಂತರ ಮಂದಿ ಕ್ಯಾನ್ಸಲ್ ಮಾಡಿದ್ದು ಇದರಿಂದ ಚಿತ್ರಕ್ಕೆ ಬಿಡುಗಡೆಗೂ ಮುನ್ನ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂಬ ಸುಳ್ಳು ಸುದ್ದಿಹರಿದಾಡಿತ್ತು. ನಂತರ, ಚಿತ್ರದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ ಯುವಕನ ಹೆಸರನ್ನು ಬದಲಾಯಿಸುವ ಮೂಲಕ ಧರ್ಮವನ್ನೂ ಬದಲಾಯಿಸಲಾಗಿದೆ ಎಂದು ಅಪಪ್ರಚಾರ ನಡೆಸಲಾಗಿತ್ತು. ಆದರೆ ಇದೀಗ ಚಿತ್ರತಂಡ ಇದಕ್ಕೂ ಸ್ಪಷ್ಟನೆ ನೀಡಿದ್ದು ಯುವಕನ ಹೆಸರನ್ನು ಬದಲಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಪ್ರಕರಣದ ವಿವರ
2005 ರಲ್ಲಿ ದೆಹಲಿಯಲ್ಲಿ ಲಕ್ಷ್ಮಿ ಅಗರ್ವಾಲ್ ಯುವತಿಯೊಬ್ಬಳ ಮೇಲೆ ನಯೀಮ್ ಖಾನ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ಆ್ಯಸಿಡ್ ದಾಳಿ ಮಾಡಿದ್ದನು. ಈ ನೈಜ ಘಟನೆ ಆಧರಿಸಿ ಮೇಘನಾ ಗುಲ್ಜಾರ್ ' ಚಪಾಕ್' ಸಿನಿಮಾವನ್ನು ಮಾಡಿದ್ದಾರೆ. ದೀಪಿಕಾ ಜೆಎನ್ಯುಗೆ ಭೇಟಿ ಮಾಡಿದ ನಂತರ ಚಿತ್ರದ ಬಗ್ಗೆ ಅಪಪ್ರಚಾರ ಆರಂಭವಾಯ್ತು. ನಿಜಜೀವನದಲ್ಲಿ ಲಕ್ಷ್ಮಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ಯುವಕನ ಹೆಸರು ನಯೀಮ್. ಆದರೆ ಸಿನಿಮಾದಲ್ಲಿ ಯುವಕನ ಹೆಸರನ್ನು ರಾಜೇಶ್ ಎಂದು ಬದಲಿಸುವ ಮೂಲಕ ಧರ್ಮವನ್ನು ಬದಲಿಸಲಾಗಿದೆ ಎಂದು ಆರೋಪಿಸಿ ಟ್ವಿಟ್ಟರ್ನಲ್ಲಿ “#Boycott Chhapaak” ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು.
ಆದರೆ ಈ ಬಗ್ಗೆ ವಿವರಣೆ ನೀಡಿರುವ ಚಿತ್ರತಂಡ, ಸಿನಿಮಾದಲ್ಲಿ ರಾಜೇಶ್ ಎಂಬುದು ದೀಪಿಕಾ ಬಾಯ್ಫ್ರೆಂಡ್ ಹೆಸರು. ಆದರೆ ಆ್ಯಸಿಡ್ ದಾಳಿ ಮಾಡಿದ ಯುವಕನ ಹೆಸರನ್ನು ನಯೀಮ್ ಬದಲಿಗೆ ಬಶೀರ್ ಎಂದು ಇಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ವಿವಾದದ ನಂತರ ಚಿತ್ರವನ್ನು ವೀಕ್ಷಿಸಿದ ಚಿತ್ರ ವಿಮರ್ಶಕರೊಬ್ಬರು ಸಿನಿಮಾದಲ್ಲಿ ಆ್ಯಸಿಡ್ ದಾಳಿ ಮಾಡಿದ ಯುವಕನ ಹೆಸರು ಬಶೀರ್, ಚಿತ್ರದಲ್ಲಿ ಧರ್ಮವನ್ನು ಬದಲಿಸಿಲ್ಲ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.