ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪುಷ್ಪ. ನಿನ್ನೆಯಷ್ಟೇ ಬೆಂಗಳೂರಲ್ಲಿ ಚಿತ್ರತಂಡ ಪ್ರಚಾರ ಕಾರ್ಯಕ್ರಮ ನಡೆಸಿ, ಸಿನಿಮಾ ನೋಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿತ್ತು. ಆದರೆ, ಸಿನಿಮಾದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಷ್ಪ ಸಿನಿಮಾ ನಾಳೆಯಿಂದ ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ. ಆದರೆ, ಪುಷ್ಪ ಸಿನಿಮಾದ ವಿತರಕ ಸ್ವಾಗತ್ ಅವರ ಎಡವಟ್ಟಿನಿಂದ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ #BoycottPushpainKarnataka ಹ್ಯಾಶ್ ಟ್ಯಾಗ್ ಕೊಟ್ಟು ಸಿನಿಮಾವನ್ನು ನಿಷೇಧ ಮಾಡುವಂತೆ ಕನ್ನಡಿಗರು ಅಭಿಯಾನ ಆರಂಭಿಸಿದ್ದಾರೆ.
ಪುಷ್ಪ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ಹೀಗಾಗಿ ಕನ್ನಡಿಗರು ಚಿತ್ರತಂಡ ಹಾಗೂ ಕರ್ನಾಟಕದಲ್ಲಿ ಈ ಚಿತ್ರವನ್ನು ವಿತರಣೆ ಮಾಡುತ್ತಿರುವ ವಿತರಕ ಸ್ವಾಗತ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಉದ್ದೇಶ ಪೂರ್ವಕವಾಗಿ ತೆಲುಗು ಅವತರಣಿಕೆಯನ್ನು ಕನ್ನಡಿಗರಿಗೆ ತೋರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಜೊತೆಗೆ ಪುಷ್ಪ ಚಿತ್ರತಂಡ ಕನ್ನಡಕ್ಕೆ ಡಬ್ ಮಾಡಿದ್ದರೂ ಕೂಡ ಕಡಿಮೆ ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್ ಪುಷ್ಪ ಸಿನಿಮಾನ್ನು ಪ್ರದರ್ಶನ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ 749 ಸ್ಕ್ರೀನ್ಗಳಲ್ಲಿ ತೆಲುಗು ವರ್ಷನ್ ಪುಷ್ಪ ಸಿನಿಮಾ ಬಿಡುಗಡೆ ಮಾಡಲಾಗುತ್ತಿದ್ದು, ಕೇವಲ 8 ಸ್ಕ್ರೀನ್ಗಳಲ್ಲಿ ಕನ್ನಡ ವರ್ಷನ್ ಚಿತ್ರ ರಿಲೀಸ್ ಆಗುತ್ತಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ತೆಲುಗಿನಲ್ಲಿಯೇ ಸಿನಿಮಾ ತೋರಿಸುವುದಾಗಿದ್ದರೆ ಕನ್ನಡಕ್ಕೆ ಯಾಕೆ ಡಬ್ ಮಾಡಬೇಕಿತ್ತು ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ಭಾವನೆಗೆ ಧಕ್ಕೆ ತಂದ ಎಂಇಎಸ್ ಪುಂಡರ ವಿರುದ್ಧ ಚಂದನವನದ ಕಿಡಿ