ಅಶುಬೆದ್ರ ಮೊದಲ ಬಾರಿಗೆ ನಿರ್ಮಾಪಕನಾಗಿ, ನಾಯಕನಾಗಿ ಮಿಂಚಿರುವ 'ಅಳಿದು ಉಳಿದವರು' ಚಿತ್ರ ಅರ್ಧಶತಕ ಬಾರಿಸಿದೆ. ನಂಬಿಕೆ ಮತ್ತು ಮೂಢನಂಬಿಕೆಗಳನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಕಳೆದ ವರ್ಷ ಡಿಸೆಂಬರ್ 6 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.
ಹಾಫ್ ಸೆಂಚುರಿ ಬಾರಿಸಿದ ಖುಷಿಯನ್ನು ಚಿತ್ರತಂಡ ಸಂಭ್ರಮದಿಂದ ಆಚರಿಸಿದೆ. ಚಿತ್ರಕ್ಕಾಗಿ ತೆರೆ ಮುಂದೆ ಹಾಗೂ ಹಿಂದೆ ದುಡಿದಿರುವ ತಂತ್ರಜ್ಞರಿಗೆ ಹಾಗೂ ನಟರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ. 'ಅಳಿದು ಉಳಿದವರು' ಚಿತ್ರದ 55 ದಿನಗಳ ಸಂಭ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಸಾಕ್ಷಿಯಾದ್ರು. ಚಿತ್ರಕ್ಕೆ ದುಡಿದವರಿಗಾಗಿ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು. ಈ ಚಿತ್ರವನ್ನು ಅರವಿಂದ್ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಇನ್ನು ಅಶುಬೆದ್ರ ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲೇ ಯಶಸ್ವಿಯಾಗಿದ್ದು ಚಿತ್ರರಂಗದಲ್ಲಿ ನೆಲೆಯೂರುವ ಸೂಚನೆ ನೀಡಿದ್ದಾರೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತವಿದ್ದು ಚಿತ್ರದ ಗೆಲುವಿನಲ್ಲಿ ಮಿಥುನ್ ಮ್ಯೂಸಿಕ್ ಕೂಡಾ ಮ್ಯಾಜಿಕ್ ಮಾಡಿದೆ. ಜೊತೆಗೆ ಚಿತ್ರದಲ್ಲಿ ಧರ್ಮಣ್ಣ, ಪವನ್ ಕುಮಾರ್, ಅತುಲ್ ಕುಲಕರ್ಣಿ ಹಾಗೂ ಸಂಗೀತ ಭಟ್ ನಟಿಸಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ವಾರಕ್ಕೆ 7-8 ಸಿನಿಮಾಗಳ ಅಬ್ಬರದ ನಡೆವೆಯೂ 'ಅಳಿದು ಉಳಿದವರು' ಚಿತ್ರಮಂದಿರದಲ್ಲಿ 55 ದಿನಗಳು ಉಳಿದಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.