ಅಂತಾರಾಷ್ಟ್ರೀಯ ಖ್ಯಾತಿಯಲ್ಲಿ ಮನ್ನಣೆಗಳಿಸಿರುವ, ಹಿರಿಯ ಸಾಹಿತಿ ಹಾಗೂ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬರೋಬ್ಬರಿ ಏಳು ವರ್ಷಗಳ ನಂತ್ರ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಹಿರಿಯ ಸಾಹಿತಿ ಹಾಗೂ ಕವಿ ಜಯಂತ್ ಕಾಯ್ಕಿಣಿ ಅವರ "ಹಾಲನ ಮೀಸೆ ಕಥೆ" ಆಧಾರಿತ "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ" ಎಂಬ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಇದೀಗ ಗಿರೀಶ್ ಕಾಸರವಳ್ಳಿ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಸಿನಿಮಾಗೆ ಮುಹೂರ್ತದ ಪೂಜೆ ಮುಗಿಸಿದ್ದು, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಿನಿಮಾಕ್ಕೆ ಕ್ಲಾಪ್ ಮಾಡಿದ್ದಾರೆ.
ಉಡುಪಿ ನೇಜಾರು ಗ್ರಾಮದಲ್ಲಿ ಈ ಚಿತ್ರೀಕರಣವನ್ನ ಆರಂಭಿಸಲಾಗಿದೆ. ಮನುಷ್ಯ ಬದುಕು ಕಟ್ಟಿಕೊಳ್ಳಲು ತಾನಿರುವ ಜಾಗದಿಂದ ಬೇರೆ ಕಡೆ ಹೋಗಿ ಹೊಸ ಭವಿಷ್ಯ ಕಟ್ಟಿಕೊಳ್ಳುವ ತವಕ ಹಾಗೂ ಹೊರ ಬಂದ ಬದುಕಿಗೆ ಹಿಂದಿರುಗಿ ಹೋಗಲಾಗದೇ ಪಡುವ ತೊಳಲಾಟವೇ ಈ ಸಿನಿಮಾದ ಸ್ಟೋರಿ.
ಬಿ.ಎಂ ವೆಂಕಟೇಶ್, ಬಾಲ ಕಲಾವಿದ ದೃಶ, ಪವಿತ್ರ ಮಾಲತೇಶ್, ಕೆ.ಜಿ.ಕೃಷ್ಣಮೂರ್ತಿ,ಶೃಂಗೇರಿ ರಾಮಣ್ಣ, ಪುಷ್ಪ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕಿಲಾಡಿ ಕಿಟ್ಟು ಚಿತ್ರವನ್ನ ನಿರ್ಮಾಣ ಮಾಡಿದ್ದ, ಎಚ್,ವಿ ಶಿವಕುಮಾರ್ ಸಂಗಮ ಫಿಲ್ಮ್ ಬ್ಯಾನರ್ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯ ಉಡುಪಿಯಲ್ಲಿ ಶೂಟಿಂಗ್ ಮಾಡುತ್ತಿರುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಎರಡನೇ ಹಂತದ ಚಿತ್ರೀಕರಣವನ್ನ ಬೆಂಗಳೂರಿನಲ್ಲಿಯೇ ಮಾಡಲಿದ್ದಾರಂತೆ.