ಬಾಲಿವುಡ್ ನಟಿ ರವೀನಾ ಟಂಡನ್ 1999 ರಲ್ಲಿ ಬಿಡುಗಡೆಯಾದ 'ಉಪೇಂದ್ರ' ಚಿತ್ರದಲ್ಲಿ ರಿಯಲ್ ಸ್ಟಾರ್ ಜೊತೆ ನಟಿಸಿ ಕನ್ನಡಿಗರ ಮನಸ್ಸಿಗೆ ಬಹಳ ಹತ್ತಿರವಾಗಿದ್ದರು. ತಮ್ಮ ಮಕ್ಕಳೊಂದಿಗೆ ಬೇರೆ ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು ಅವರ ಜವಾಬ್ದಾರಿ ಹೊರುವ ಮೂಲಕ ಸಮಾಜಸೇವೆಯಲ್ಲೂ ಅವರು ಮುಂದಿದ್ದಾರೆ.
ರವೀನಾ ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಬಹಳ ಆ್ಯಕ್ಟಿವ್ ಇದ್ದಾರೆ. ಇದುವರೆಗೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. 2002 ರಲ್ಲಿ ದತ್ತು ಪಡೆದ ಪೂಜಾ ಹಾಗೂ ಛಾಯಾ ಎಂಬ ಹೆಣ್ಣುಮಕ್ಕಳಿಗೆ ಒಳ್ಳೆಯ ಕಡೆ ವರ ನೋಡಿ ಮದುವೆ ಮಾಡಿ ಮೊಮ್ಮಕ್ಕಳನ್ನು ಎತ್ತಿ ಆಡಿಸುತ್ತಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರವೀನಾ ಷೇರ್ ಮಾಡಿಕೊಂಡಿದ್ದರು. ಈಗ ವಿಶ್ವದ ಅತಿ ದೊಡ್ಡ ಮಹಿಳಾ ಸಂಸ್ಥೆಯೊಂದರ ಜೊತೆಗೆ ಸೇರಿಕೊಂಡು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಹೆಚ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಆದ 9 ವಿಶೇಷ ಚೇತನ ವಿದ್ಯಾರ್ಥಿನಿಯರಿಗೆ ಸಹಾಯ ಮಾಡುತ್ತಿದ್ದಾರೆ.
ರವೀನಾ ಮಾಡುತ್ತಿರುವ ಈ ಸೇವೆಯನ್ನು ಯುನೈಟೆಡ್ ನೇಷನ್ ಸಹ ಗುರುತಿಸಿದೆ. 'ಸಮಾಜದಲ್ಲಿ ಇಂತಹ ವಿಶೇಷ ಚೇತನ ಮಕ್ಕಳಿಗೆ ಅದರಲ್ಲೂ ವಿದ್ಯೆಯಲ್ಲಿ ಸಾಧನೆ ಮಾಡಿದವರಿಗೆ ಸಹಾಯ ಮಾಡಲು ಸಂತೋಷ ಆಗುತ್ತದೆ. ಅವರ ಸಾಧನೆಯನ್ನು ಗುರುತಿಸಿವುದರಿಂದ ಅವರಿಗೆ ಆತ್ಮವಿಶ್ವಾಸ ತುಂಬಿದಂತಾಗುತ್ತದೆ. ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸ್ಫೂರ್ತಿ ತುಂಬಿದಂತೆ ಆಗುತ್ತದೆ. ಇದು ನನಗೂ ಕೂಡಾ ವೈಯಕ್ತಿಕವಾಗಿ ಖುಷಿ ನೀಡಿದೆ' ಎಂದು ರವೀನಾ ಹೇಳಿದ್ದಾರೆ.
ಇನ್ನು ಬಹಳ ವರ್ಷಗಳ ನಂತರ ಮತ್ತೆ ರವೀನಾ 'ಕೆಜಿಎಫ್-2' ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಈ ಚಿತ್ರದಲ್ಲಿ ರವೀನಾ ಪ್ರಧಾನ ಮಂತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ರವೀನಾ ಪತಿ ಅನಿಲ್ ಟಂಡನ್ ಹಿಂದಿಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.