ವಿಜಯಪುರ: ಅನಾಥ ಶವಗಳೆಂದು ಪೊಲೀಸರು ಅಂತ್ಯಕ್ರಿಯೆ ನಡೆಸಿದ ಮೂವರು ಒಂದೇ ಕುಟುಂಬದವರು ಎಂಬ ವಿಷ್ಯ ಪೊಲೀಸರಿಗೆ ತಡವಾಗಿ ಗೊತ್ತಾಗಿದ್ದು. ಮೃತರ ಕುಟುಂಬದವರು ಆಘಾತಗೊಂಡಿದ್ದಾರೆ.
ಕೌಟುಂಬಿಕ ಕಲಹದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಕೃಷ್ಣಾ ನದಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದ ನಿವಾಸಿ ಅಶೋಕ ಹವಾಲ್ದಾರ ಅವರ ಪತ್ನಿ ರೇಣುಕಾ ಹವಾಲ್ದಾರ (45), ಪುತ್ರಿ ಐಶ್ವರ್ಯ (23) ಹಾಗೂ ಪುತ್ರ ಅಖಿಲೇಶ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ತಾಯಿ ರೇಣುಕಾ ಮೃತ ದೇಹ ಪತ್ತೆಯಾಗಿತ್ತು. ಬಳಿಕ ನಿನ್ನೆ ರಾತ್ರಿ ಐಶ್ವರ್ಯ ಹಾಗೂ ಅಖಿಲೇಶ ಮೃತ ದೇಹಗಳಿಗೆ ಪತ್ತೆಯಾಗಿದೆ.
ಶವ ಪತ್ತೆಯಾದ ಬಳಿಕ ಅನಾಥ ಶವಗಳೆಂದು ಪರಿಗಣಿಸಿ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದರು. ಬಳಿಕ ಮೂವರು ವ್ಯಕ್ತಿಗಳು ನಾಪತ್ತೆಯಾದ ಕುರಿತು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಕುಟುಂಬದ ಸದಸ್ಯರನ್ನು ಸ್ಥಳಕ್ಕೆ ಕರೆಸಿ ಮೃತರ ಬಟ್ಟೆ ಪರಿಶೀಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ಗುರುತು ಪತ್ತೆಯಾಗಿದೆ. ಸದ್ಯ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.