ನವದೆಹಲಿ: ನಿಯಂತ್ರಣ ಕಳೆದುಕೊಂಡ ಬಸ್ವೊಂದು ಬೀದಿಬದಿ ಅಂಗಡಿಗಳಿಗೆ ನುಗ್ಗಿದ ಪರಿಣಾಮ 12 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ ನಂದ್ ನಗರಿಯಲ್ಲಿ ನಡೆದಿದೆ.
ಗುರುವಾರ ರಾತ್ರಿ ನಂದ್ ನಗರಿಯ ಫ್ಲೈಓವರ್ನಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಜಮಾಯಿಸಿದ ಉದ್ರಿಕ್ತ ಸಾರ್ವಜನಿಕರು, ಬಸ್ಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಲು ಯತ್ನಿಸಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು ಈಶಾನ್ಯ ದೆಹಲಿ ಡಿಸಿಪಿ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.