ವಾರಣಾಸಿ: ಆತ್ಮಹತ್ಯಾ ಪ್ರವೃತ್ತಿ ಮತ್ತು ಅದು ಉಂಟಾಗದಂತೆ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಥೀಮ್ ಅನ್ನು ಡಬ್ಲ್ಯೂಎಚ್ಒ ನೀಡಿದ್ದು, ಅದು ಹೀಗಿದೆ: ಕ್ರಿಯೆಯ ಮೂಲಕ ಭರವಸೆಯನ್ನು ಸೃಷ್ಟಿಸುವುದು. ಆತ್ಮಹತ್ಯೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವ ಹತಾಶೆಯ ಬಗ್ಗೆ ಹೇಳುವುದು ಮತ್ತು ಆತ್ಮಹತ್ಯೆಗಳನ್ನು ತಡೆಯುವ ಭರವಸೆಯನ್ನು ಜನರಲ್ಲಿ ಮೂಡಿಸುವುದು ಈ ಥೀಮ್ನ ಉದ್ದೇಶವಾಗಿದೆ.
ಆದರೆ, ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಕೊನೆಗೊಳಿಸಲು ಆತ್ಮಹತ್ಯೆಯಂತಹ ಕಠಿಣ ಹೆಜ್ಜೆಯನ್ನು ಏಕೆ ತೆಗೆದುಕೊಳ್ಳುತ್ತಾನೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಕುರಿತಂತೆ ಈಟಿವಿ ಭಾರತ್ ಉತ್ತರ ಪ್ರದೇಶ ಬ್ಯೂರೋ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಹಿರಿಯ ಸಲಹೆಗಾರ ಡಾ. ಮನೋಜ್ ತಿವಾರಿ ಅವರೊಂದಿಗೆ ವಿಶೇಷ ಸಂವಾದ ನಡೆಸಿದ್ದು, ಅವರು ಆತ್ಮಹತ್ಯೆಯ ಆಲೋಚನೆಗಳು ಮತ್ತು ತಡೆಗಟ್ಟುವ ಕ್ರಮಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಒಬ್ಬ ವ್ಯಕ್ತಿಯು ಮೊದಲು ಆತ್ಮಹತ್ಯೆಯ ಆಲೋಚನೆಗಳನ್ನು ಪುನರಾವರ್ತಿಸುತ್ತಾನೆ ಮತ್ತು ನಂತರ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ ಎಂದು ಡಾ. ತಿವಾರಿ ಹೇಳುತ್ತಾರೆ.
ಸಮೀಕ್ಷೆಯ ಪ್ರಕಾರ, ಎಲ್ಲಾ ಆತ್ಮಹತ್ಯೆ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಆದರೆ, 25 ಜನರಲ್ಲಿ ಒಬ್ಬರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಡಾ. ತಿವಾರಿ ಅವರ ಪ್ರಕಾರ- ಆತ್ಮಹತ್ಯೆಗೆ ಪ್ರಮುಖ ಕಾರಣಗಳು ಆರ್ಥಿಕ ಒತ್ತಡ, ಸಾಮಾಜಿಕ ಪ್ರತ್ಯೇಕತೆ, ಆರೋಗ್ಯಕರ ಮನರಂಜನೆಯ ಕೊರತೆ, ಉದ್ಯೋಗ ನಷ್ಟ, ಕೌಟುಂಬಿಕ ಕಲಹ, ಹೊಂದಾಣಿಕೆ ಸಮಸ್ಯೆಗಳು, ಮಾನಸಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಪ್ರಕೋಪಗಳು.
ಆತ್ಮಹತ್ಯಾ ಆಲೋಚನೆಗಳ ಲಕ್ಷಣಗಳ ಪ್ರಕಾರ ವ್ಯಕ್ತಿಯು ಕುಟುಂಬ, ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಜೀವನವನ್ನು ಕೊನೆಗೊಳಿಸುವುದನ್ನು ಚರ್ಚಿಸುತ್ತಾನೆ. ನಿರಾಶಾವಾದಿ ಚಿಂತನೆ, ಹತಾಶೆಯನ್ನು ವ್ಯಕ್ತಪಡಿಸುತ್ತಾನೆ. ಹೆಚ್ಚಿನ ಮಟ್ಟದ ಅಪರಾಧ, ಅಸಹಾಯಕತೆ, ಮಾದಕ ವ್ಯಸನ ಮತ್ತು ಸಾಮಾಜಿಕ ಪ್ರತ್ಯೇಕತೆ ವ್ಯಕ್ತಪಡಿಸುತ್ತಾನೆ.
ಒಂಟಿತನವೇ ಆತ್ಮಹತ್ಯೆಗೆ ದಾರಿ: ಒಂಟಿತನವು ಆತ್ಮಹತ್ಯೆಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಆತ್ಮಹತ್ಯಾ ಆಲೋಚನೆಗಳು ಬರುತ್ತಿರುವ ಸಂದರ್ಭದಲ್ಲಿ ತರಬೇತಿ ಪಡೆದ ಮತ್ತು ಅನುಭವಿ ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು ಮತ್ತು ಜೀವನೋತ್ಸಾಹವನ್ನು ಹೆಚ್ಚಿಸಲು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಅಗತ್ಯ ಎಂದು ಡಾ. ತಿವಾರಿ ಶಿಫಾರಸು ಮಾಡುತ್ತಾರೆ.
ಜೀವನದಲ್ಲಿ ಎಂಥದೇ ಸನ್ನಿವೇಶ ಎದುರಾದರೂ ತಾಳ್ಮೆಯಿಂದಿರಿ. ಯಾವಾಗಲೂ ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳುವಂತೆ ಮತ್ತು ನಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಅವರು ಸಲಹೆ ನೀಡುತ್ತಾರೆ.
ಸಾಮಾಜಿಕ ಸಹಭಾಗಿತ್ವದದ ಅಗತ್ಯತೆ: ಆತ್ಮಹತ್ಯೆಯ ಆಲೋಚನೆಗಳನ್ನು ದೂರವಿಡಲು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷದಿಂದ ಸಮಯ ಕಳೆಯುವಂತೆ ಡಾ. ತಿವಾರಿ ಶಿಫಾರಸು ಮಾಡಿದ್ದಾರೆ. ಆತ್ಮಹತ್ಯೆ ತಡೆಗೆ ಸಮಾಜದ ಪ್ರತಿಯೊಂದು ವರ್ಗದವರ ಸಹಭಾಗಿತ್ವ ಬಹಳ ಮುಖ್ಯ ಎಂದು ತಿಳಿಸಿದ ಅವರು, ಶೇ.40 ರಷ್ಟು ಜನರು ಕೌಟುಂಬಿಕ ಪರಿಸ್ಥಿತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದು, ಇದನ್ನು ತಡೆಗಟ್ಟುವಲ್ಲಿ ಕುಟುಂಬ ಸದಸ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪ್ರಾರಂಭಿಕ ಶಿಕ್ಷಣದಿಂದಲೇ ಮಕ್ಕಳಿಗೆ ಜೀವನದಲ್ಲಿ ಹೋರಾಟದ ಮಹತ್ವದ ಅರಿವು ಮೂಡಿಸಬೇಕು. ಜೀವನದಲ್ಲಿ ಯಾವುದೇ ಸಮಸ್ಯೆಯಾದರೆ ಅದನ್ನು ಪರಿಹರಿಸಬಹುದು. ಆದರೆ, ಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಬೇಕು. ಸರ್ಕಾರ ಜನರ ದೈಹಿಕ ಸ್ವಾಸ್ಥ್ಯದತ್ತ ಗಮನ ಹರಿಸುವ ಹಾಗೆ ಅವರ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಬೇಕು. ಸಕಾಲದಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ಗ್ರಾಮ ಮಟ್ಟದಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕೆನ್ನುತ್ತಾರೆ ಡಾ. ತಿವಾರಿ.
ಆತ್ಮಹತ್ಯೆಯಲ್ಲಿ ಭಾರತಕ್ಕೆ 43ನೇ ಸ್ಥಾನ: ಗಮನಾರ್ಹ ವಿಷಯವೆಂದರೆ, ಆತ್ಮಹತ್ಯೆಗಳಲ್ಲಿ ಭಾರತವು 43 ನೇ ಸ್ಥಾನದಲ್ಲಿದೆ. ಶೇ 77 ರಷ್ಟು ಆತ್ಮಹತ್ಯೆಗಳು ಕಡಿಮೆ ಮತ್ತು ಮಧ್ಯಮ - ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ. ಜಗತ್ತಿನಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಳೆದ ವರ್ಷ ಸುಮಾರು ಒಂದು ಮಿಲಿಯನ್ ಜನರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ವಿಶ್ವದ ಒಟ್ಟು ಆತ್ಮಹತ್ಯೆಗಳಲ್ಲಿ ಭಾರತದ ಪಾಲು ಶೇ 21 ರಷ್ಟಿದೆ.
ಲಿಂಗಾಧಾರಿತವಾಗಿ ನೋಡಿದರೆ, ಅದರಲ್ಲಿ ಪ್ರತಿ ವರ್ಷ ಶೇ 36 ರಷ್ಟು ಮಹಿಳೆಯರು ಆತ್ಮಹತ್ಯೆಯಿಂದ ಸಾಯುತ್ತಾರೆ. ವಿಶ್ವದ ಶೇ 18 ರಷ್ಟು ಮಹಿಳೆಯರು ಭಾರತದಲ್ಲಿಯೇ ಇರುವುದರಿಂದ, ದೇಶದ ಮಹಿಳೆಯರು ಆತ್ಮಹತ್ಯೆ ಶರಣಾಗುವ ಸಂಖ್ಯೆ ಹೆಚ್ಚು ಎಂದು ಡಾ ತಿವಾರಿ ಹೇಳಿದರು. ಕೌಟುಂಬಿಕ ಹಿಂಸಾಚಾರವು ಆತ್ಮಹತ್ಯೆಗಳ ಹಿಂದಿನ ಪ್ರಮುಖ ಕಾರಣವಾಗಿದೆ. ಒಟ್ಟು ಆತ್ಮಹತ್ಯೆಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ 7.4 ರಷ್ಟಿದೆ. ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದು ಆತ್ಮಹತ್ಯೆ ನಡೆಯುತ್ತಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಪ್ರತಿ ವರ್ಷ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವೂ ಹೆಚ್ಚುತ್ತಿದೆ. 2020 ರಲ್ಲಿ ಸುಮಾರು 12,526 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಇದು 2021 ರಲ್ಲಿ 13,089 ಕ್ಕೆ ಏರಿದೆ. ಒಟ್ಟು ಶೇ 44 ರಷ್ಟು ವಿದ್ಯಾರ್ಥಿಗಳ ಆತ್ಮಹತ್ಯೆ ಬಲಿಪಶುಗಳು ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶದವರು. 15-24 ವರ್ಷ ವಯಸ್ಸಿನ ಜನರ ಸಾವಿಗೆ ಎರಡನೇ ಪ್ರಮುಖ ಕಾರಣ ಆತ್ಮಹತ್ಯೆ. ಗಮನಾರ್ಹವೆಂದರೆ ದೇಶದ ಭದ್ರತೆಯಲ್ಲಿ ತೊಡಗಿರುವ ಸೈನಿಕರಲ್ಲಿ ಕೂಡ ಆತ್ಮಹತ್ಯೆಯ ಪ್ರವೃತ್ತಿ ಹರಡುತ್ತಿದೆ.
ಇದನ್ನೂ ಓದಿ: ದಾಯಾದಿಗಳ ಚುಚ್ಚು ಮಾತುಗಳಿಗೆ ಮನನೊಂದ 75ರ ವೃದ್ಧ: ನದಿಗೆ ಹಾರಿ ಆತ್ಮಹತ್ಯೆ