ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ಅದರ ನಿಗದಿತ ಮುಕ್ತಾಯ ದಿನಾಂಕಕ್ಕೆ ಮೂರು ದಿನಗಳ ಮೊದಲು ಅಂದರೆ ಆಗಸ್ಟ್ 9 ರಂದು ವಿಸರ್ಜಿಸಲು ನಿರ್ಧರಿಸಲಾಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಈ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ 90 ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲು ಅನುಕೂಲವಾಗುವಂತೆ ಶರೀಫ್ ಅವರು ಮೂರು ದಿನ ಮೊದಲೇ ಅಸೆಂಬ್ಲಿ ವಿಸರ್ಜಿಸಲಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಆಗಸ್ಟ್ 3 ರಂದು ಪ್ರಧಾನ ಮಂತ್ರಿ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಶರೀಫ್ ಈ ಘೋಷಣೆ ಮಾಡಿದ್ದಾರೆ. ಸಂಸತ್ ಸದಸ್ಯರ ಗೌರವಾರ್ಥ ಈ ಔತಣಕೂಟ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ದೇಶದ ರಾಜಕೀಯ ಪರಿಸರದ ಕುರಿತು ಪರಾಮರ್ಶೆ ನಡೆಸಿ ಚರ್ಚಿಸಲಾಯಿತು. ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದಲ್ಲಿನ ಆಂತರಿಕ ಸಮಾಲೋಚನೆಯು ಅಂತಿಮ ಹಂತಕ್ಕೆ ಬಂದಿದೆ ಎಂದು ಹೇಳಿದ ಪ್ರಧಾನಿ, ಆಗಸ್ಟ್ 4 ರಂದು ಉಸ್ತುವಾರಿ ಸರ್ಕಾರವನ್ನು ಸ್ಥಾಪಿಸಲು ಮಿತ್ರಪಕ್ಷಗಳೊಂದಿಗೆ ಅಂತಿಮ ಸುತ್ತಿನ ಚರ್ಚೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.
ಗುರುವಾರ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಈ ವಿಷಯದ ಬಗ್ಗೆ ಪ್ರಧಾನಿಯೊಂದಿಗೆ ಸುದೀರ್ಘ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಸಮ್ಮಿಶ್ರ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಶರೀಫ್ ತಮ್ಮ ಮಿತ್ರಪಕ್ಷಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ದೇಶದಲ್ಲಿ 1.3 ಮಿಲಿಯನ್ ಹೊಸ ತೆರಿಗೆದಾರರು ಸೇರಿದ ನಂತರ 15 ತಿಂಗಳುಗಳಲ್ಲಿ ದೇಶದ ಆದಾಯ ಸಂಗ್ರಹ ಶೇಕಡಾ 13 ರಷ್ಟು ಹೆಚ್ಚಾಗಿರುವ ವಿಷಯವನ್ನೇ ಅವರು ಮಿತ್ರ ಪಕ್ಷಗಳಿಗೆ ಪ್ರಮುಖವಾಗಿ ಒತ್ತಿ ಹೇಳಿದ್ದಾರೆ.
ವಿದ್ಯುತ್ ವಲಯದ ಚೇತರಿಕೆಯು ಶೇಕಡಾ 90 ಕ್ಕಿಂತ ಹೆಚ್ಚಿನ ಸ್ತರದಲ್ಲಿದೆ ಮತ್ತು ಕಳೆದ ನಾಲ್ಕು ತಿಂಗಳಲ್ಲಿ ಐಟಿ ಕ್ಷೇತ್ರದಲ್ಲಿ ದೇಶವು ಗಣನೀಯ ಪ್ರಗತಿಯನ್ನು ಕಂಡಿದೆ. ಕಳೆದ ಒಂದು ವರ್ಷದಲ್ಲಿ ಐಟಿ ರಫ್ತಿನ ಒಟ್ಟು ಪ್ರಮಾಣವು 2.6 ಶತಕೋಟಿ ಡಾಲರ್ಗೆ ತಲುಪಿದೆ ಎಂದು ಹೇಳಿದರು.
ನಾವು ಹೊಸ ಜನಗಣತಿಯ ಆಧಾರದ ಮೇಲೆ ಚುನಾವಣೆಗಳನ್ನು ನಡೆಸಬೇಕಿದೆ. ಜನಗಣತಿ ನಡೆದಿದೆ ಎಂದ ಮೇಲೆ ಚುನಾವಣೆಗಳು ಅದರ ಆಧಾರದ ಮೇಲೆಯೇ ನಡೆಯಬೇಕು. ಹೊಸ ಜನಗಣತಿಯ ಆಧಾರದ ಮೇಲೆ ಚುನಾವಣೆ ನಡೆಸಲು ಯಾವುದೇ ಸಮಸ್ಯೆಗಳಿವೆ ಎಂದು ನನಗೆ ಅನಿಸುತ್ತಿಲ್ಲ ಎಂದು ಶರೀಫ್ ಹೇಳಿದರು.
ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾನಿ, ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ರಾಜಾ ಪರ್ವೈಜ್ ಅಶ್ರಫ್, ಪಿಪಿಪಿ ನಾಯಕರಾದ ಯೂಸುಫ್ ರಾಜಾ ಗಿಲಾನಿ, ಎಂಕ್ಯೂಎಂ ಸಂಚಾಲಕ ಖಾಲಿದ್ ಮಕ್ಬೂಲ್ ಸಿದ್ದಿಕಿ, ಜೆಯುಐ-ಎಫ್ ನಾಯಕ ಅಸಾದ್ ಮೆಹಮೂದ್, ಬಲೂಚಿಸ್ತಾನ್ ಅವಾಮಿ ಪಕ್ಷದ ನಾಯಕರಾದ ಖಾಲಿದ್ ಮಗ್ಸಿ ಮತ್ತು ಸೆನೆಟರ್ ಅಹ್ಮದ್ ಖಾನ್, ಜಮ್ಹೂರಿ ವತನ್ ಪಾರ್ಟಿಯ ಶಹಜೈನ್ ಬುಗ್ತಿ, ಅಸ್ಲಂ ಭೂತಾನಿ, ಮೊಹ್ಸಿನ್ ದಾವರ್ ಸೇರಿದಂತೆ ಹಲವಾರು ಗಣ್ಯರು ಆಗಸ್ಟ್ 3 ರಂದು ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : Sudan Conflict: ಸುಡಾನ್ನಲ್ಲಿ ಹಸಿವಿನ ಸಮಸ್ಯೆ ಭೀಕರ; ವಿಶ್ವಸಂಸ್ಥೆ ಕಳವಳ