ಜೆರುಸಲೆಂ: ಇಸ್ರೇಲ್ನಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಮಂಗಳವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಕಳೆದ ಏಳು ದಿನಗಳಲ್ಲಿ ಇಸ್ರೇಲ್ನಲ್ಲಿ ನಡೆದ ಮೂರನೇ ಭಯೋತ್ಪಾದಕ ದಾಳಿಯಲ್ಲಿ ಟೆಲ್ ಅವೀವ್ನ ಉಪನಗರದಲ್ಲಿ ಐವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಹನ್ನೊಂದಕ್ಕೆ ತಲುಪಿದೆ. ದಾಳಿಯ ನಂತರ ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ತಮ್ಮ ಕಟ್ಟು ನಿಟ್ಟಿನ ಸಂದೇಶದಲ್ಲಿ, ಅಂತಹ ದಾಳಿಗಳನ್ನು ಗಟ್ಟಿಯಾಗಿ ಎದುರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಪ್ರಧಾನಿ ಪ್ರತಿಜ್ಞೆ: ತಮ್ಮ ಕಾರ್ಯವನ್ನು ಚುರುಕುಗೊಳಿಸುವಂತೆ, ಭದ್ರತಾ ನಿಟ್ಟಿನಲ್ಲಿ ಹೆಚ್ಚು ಜಾಗರೂರಕಾಗಿರುವಂತೆ ಇಸ್ರೇಲಿ ಪೊಲೀಸರಿಗೆ ಪ್ರಧಾನಿ ನಫ್ತಾಲಿ ಬೆನೆಟ್ ಸೂಚಿಸಿದ್ದಾರೆ. ಇಸ್ರೇಲ್ ಕೊಲೆಗಡುಕ ಅರಬ್ ಭಯೋತ್ಪಾದನೆಯ ಅಲೆಯನ್ನು ಎದುರಿಸುತ್ತಿದೆ. ನಮ್ಮ ಭದ್ರತಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ನಾವು ನಿರಂತರವಾಗಿ ಶ್ರದ್ಧೆ ಮತ್ತು ಪರಿಶ್ರಮದಿಂದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ, ಮುಂದೆಯೂ ಹೋರಾಡುತ್ತೇವೆ. ಅವರು ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಲು ಸಾಧ್ಯವಿಲ್ಲ. ನಾವೇ ಮೇಲುಗೈ ಸಾಧಿಸುತ್ತೇವೆ ಎಂದು ಪ್ರಧಾನಿ ಪ್ರತಿಜ್ಞೆ ಮಾಡಿದ್ದಾರೆ.
ಟೆಲ್ ಅವೀವ್ ಬಳಿಯ ಬ್ನೈ ಬಾರ್ಕ್ನ ಎರಡು ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಕೋರರನ್ನು ತಡೆಯಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಸೇರಿ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಬೆನೆಟ್ ಮಂಗಳವಾರ ಸಂಜೆ ಭದ್ರತಾ ಸಮಾಲೋಚನಾ ಸಭೆ ನಡೆಸಿದರು. ಈ ಹಿಂದೆ ಬ್ನೈ ಬ್ರಾಕ್ ಮತ್ತು ರಮತ್ ಗನ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಘಟನೆಗಳ ಬಗ್ಗೆ ಚರ್ಚಿಸಲಾಯಿತು. ಭದ್ರತಾ ಪಡೆಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಪ್ರಧಾನಿಯ ವಿದೇಶಿ ಮಾಧ್ಯಮ ಸಲಹೆಗಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೀವ್ನಿಂದ ರಷ್ಯಾ ಸೇನಾ ಕಾರ್ಯಾಚರಣೆ ಕಡಿತ ಯುದ್ಧ ಅಂತ್ಯಗೊಳಿಸುವ ಮುನ್ಸೂಚನೆಯೇ..?
ಈ ಸಂಬಂಧ ಚರ್ಚಿಸಲು ಪ್ರಧಾನಿ ಬೆನೆಟ್ ಅವರು ಇಂದು ಮಧ್ಯಾಹ್ನ ರಾಷ್ಟ್ರೀಯ ರಾಷ್ಟ್ರೀಯ ಭದ್ರತಾ ವ್ಯವಹಾರಗಳ ಸಚಿವ ಸಮಿತಿ ಸಭೆಯನ್ನು ಕರೆಯಲಿದ್ದಾರೆ. ಇನ್ನೂ ಇಸ್ರೇಲ್ಗೆ ಇದು ಕಷ್ಟದ ದಿನಗ.ಳು ಆದರೆ ದೃಢಸಂಕಲ್ಪದಿಂದ ನಾವು ಈ ಬಾರಿಯೂ ಮೇಲುಗೈ ಸಾಧಿಸುತ್ತೇವೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಧ್ವನಿ ಸಂದೇಶದಲ್ಲಿ ಬೆನೆಟ್ ಹೇಳಿದ್ದಾರೆ.