ಪಾಕಿಸ್ತಾನದಲ್ಲಿ ತಾರಕಕ್ಕೇರಿದ ಹಿಂದೂಗಳ ಮೇಲಿನ ದೌರ್ಜನ್ಯ; ಕಾಶ್ಮೋರ್, ಕರಾಚಿಗಳಲ್ಲಿ ಪ್ರತಿಭಟನೆ - ಸಿಂಧ್ ಪ್ರಾಂತ್ಯದ ಕರಾಚಿಯಲ್ಲೂ ಹಿಂದೂ ಸಮುದಾಯ
ಪಾಕಿಸ್ತಾನದಲ್ಲಿನ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ತಮ್ಮ ಮೇಲಿನ ಅನ್ಯಾಯ ಖಂಡಿಸಿ ಪಾಕಿಸ್ತಾನದಲ್ಲಿನ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ.


Published : Sep 4, 2023, 2:03 PM IST
ಇಸ್ಲಾಮಾಬಾದ್ (ಪಾಕಿಸ್ತಾನ): ಜನಾಂಗೀಯ ಹಿಂಸಾಚಾರ ಮತ್ತು ಅಪಹರಣ ಕೃತ್ಯಗಳಿಂದ ನಲುಗಿರುವ ಪಾಕಿಸ್ತಾನದಲ್ಲಿನ ಹಿಂದೂ ಸಮುದಾಯದ ಜನತೆ ಅಲ್ಲಿನ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಪ್ರತಿಭಟನೆ ಆರಂಭಿಸಿದ್ದಾರೆ. ನಿರಂತರ ಅಪಹರಣ ಕೃತ್ಯಗಳು ಮತ್ತು ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯತೆ ತೋರಿಸುತ್ತಿರುವುದರಿಂದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕಾಶ್ಮೋರ್ ಜಿಲ್ಲೆಯಲ್ಲಿನ ಹಿಂದೂ ಸಮುದಾಯವು ತೀರಾ ಸಂಕಷ್ಟದಲ್ಲಿದೆ.
ಕಾಶ್ಮೋರ್ನಲ್ಲಿನ ಹಿಂದೂ ವ್ಯಾಪಾರಿಗಳು ಮತ್ತು ಸಮುದಾಯದ ಸದಸ್ಯರನ್ನು ನಿರಂತರವಾಗಿ ಅಪಹರಿಸಲಾಗುತ್ತಿದ್ದು, ಇದನ್ನು ವಿರೋಧಿಸಿ ಪ್ರಾಂತ್ಯದಾದ್ಯಂತ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತ್ಯಗಳಿಗೆ ಸಂಪರ್ಕ ಕಲ್ಪಿಸುವ ಸಿಂಧ್ ಪ್ರಾಂತ್ಯದ ಮುಖ್ಯ ಸಿಂಧೂ ಹೆದ್ದಾರಿಯನ್ನು ಕನಿಷ್ಠ 34 ಗಂಟೆಗಳ ಕಾಲ ನಿರ್ಬಂಧಿಸುವ ಮೂಲಕ ಕಾಶ್ಮೋರ್ನ ಹಿಂದೂ ಸಮುದಾಯದವರು ಬಲವಾದ ಪ್ರತಿಭಟನೆ ನಡೆಸಿದರು.
ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಾಶ್ಮೋರ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಸಮುದಾಯದಿಂದ ತಮ್ಮ ಕುಟುಂಬಸ್ಥರ ಅಪಹರಣ ಕೃತ್ಯಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
"ಹಿಂದೂ ವ್ಯಾಪಾರಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಅಪಹರಿಸಲಾಗಿದೆ. ಆದರೆ ಅವರನ್ನು ಪತ್ತೆ ಮಾಡಲು ಅಧಿಕಾರಿಗಳು ಒಂದಿನಿತೂ ಕ್ರಮ ಕೈಗೊಳ್ಳುತ್ತಿಲ್ಲ. ಕಾಶ್ಮೋರ್ ನ ನಮ್ಮ ಹಿಂದೂ ವ್ಯಾಪಾರಿಯೊಬ್ಬರ ಮಗ ಸಾಗರ್ ಕುಮಾರ್ ಎಂಬುವರನ್ನು ಅಪಹರಿಸಿ 20 ದಿನಗಳೇ ಕಳೆದಿವೆ. ಸಾಗರ್ ಅವರಿಗೆ ಅಪಹರಣಕಾರರು ಚಿತ್ರಹಿಂಸೆ ನೀಡುವ ಮತ್ತು ಹಲ್ಲೆ ಮಾಡುವ ವೀಡಿಯೊಗಳನ್ನು ನಮಗೆ ಕಳುಹಿಸಲಾಗಿದೆ. ಅವರನ್ನು ಬಿಡುಗಡೆ ಮಾಡಲು ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಮಗೆ ನ್ಯಾಯ ಒದಗಿಸುವವರು ಯಾರು?" ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣ್ ದಾಸ್ ಭೀಲ್ ಪ್ರಶ್ನಿಸಿದ್ದಾರೆ.
ಕಾಶ್ಮೋರ್ನಲ್ಲಿನ ಪ್ರತಿಭಟನೆಗಳಿಗೆ ಬೆಂಬಲಾರ್ಥವಾಗಿ ಸಿಂಧ್ ಪ್ರಾಂತ್ಯದ ಕರಾಚಿಯಲ್ಲೂ ಹಿಂದೂ ಸಮುದಾಯದವರು ಪ್ರತಿಭಟನೆ ನಡೆಸಿದರು. ಕರಾಚಿಯಲ್ಲಿನ ಹಿಂದೂ ಸಮುದಾಯ, ನಾಗರಿಕ ಸಮಾಜ ಮತ್ತು ಇತರ ನೂರಾರು ಪ್ರತಿಭಟನಾಕಾರರು ಕ್ಲಿಫ್ಟನ್ನ ತೀನ್ ತಲ್ವಾರ್ ವೃತ್ತದಲ್ಲಿ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದರು.
ಕಾಶ್ಮೀರ ಮತ್ತು ಕಾಂಧ್ಕೋಟ್ನಲ್ಲಿ ಒತ್ತೆ ಹಣಕ್ಕಾಗಿ ಅಪಹರಣ, ಹೆದ್ದಾರಿ ದರೋಡೆ, ಅಂಗಡಿ ಲೂಟಿ, ಮೋಟರ್ ಸೈಕಲ್ ಕಳ್ಳತನ ಮತ್ತು ಮನೆ ದರೋಡೆಗಳು ದಶಕಗಳಿಂದ ಅಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯದಲ್ಲಿ ಭೀತಿ ಮತ್ತು ಭಯ ಹರಡಿವೆ. ಹೆಚ್ಚುತ್ತಿರುವ ಕಾನೂನು ಅವ್ಯವಸ್ಥೆಯ ಕಾರಣದಿಂದ ವ್ಯಾಪಾರ ಮತ್ತು ಇತರ ವ್ಯವಹಾರ ಚಟುವಟಿಕೆಗಳನ್ನು ನಡೆಸುವುದು ಸಾಧ್ಯವಾಗುತ್ತಿಲ್ಲ" ಎಂದು ಕಾಶ್ಮೋರ್ನ ಸ್ಥಳೀಯ ನಿವಾಸಿ ಮತ್ತು ಉದ್ಯಮಿ ಜಿತೇಶ್ ಕುಮಾರ್ ಹೇಳಿದರು.
ಐಎಎನ್ಎಸ್ ಜೊತೆ ಮಾತನಾಡಿದ ಕಾಶ್ಮೋರ್ನ ಮತ್ತೊಬ್ಬ ಸ್ಥಳೀಯ ವ್ಯಾಪಾರಿ, ಹಿಂದೂ ಸಮುದಾಯದಲ್ಲಿ ಅಸುರಕ್ಷತೆಯ ಭಾವನೆ ಮತ್ತು ವಿಪರೀತ ಭಯ ಉಂಟಾಗಿದೆ. ಹೀಗಾಗಿ ಅನೇಕ ಕುಟುಂಬಗಳು ಪ್ರಾಂತ್ಯದ ಇತರ ಭಾಗಗಳಿಗೆ ವಲಸೆ ಹೋಗಲು ಪ್ರಾರಂಭಿಸಿವೆ. ಅಲ್ಲದೆ ಅನೇಕರು ಸಿಂಧ್ನಿಂದ ಭಾರತಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಟ್ರಂಪ್ ಮತ್ತೊಮ್ಮೆ ಅಧ್ಯಕ್ಷೀಯ ಅಭ್ಯರ್ಥಿಯಾಗುವುದಿಲ್ಲ; ನಿಕ್ಕಿ ಹ್ಯಾಲೆ