ಇಸ್ಲಾಮಾಬಾದ್: ಭಾರತದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ನಂತರ ಪಾಕ್ನೊಂದಿಗೆ ಸಂಬಂಧ ಉತ್ತಮಗೊಳ್ಳುವ ವಿಶ್ವಾಸವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಮುಂಬರುವ ಸಾರ್ವತ್ರಿಕ ಚುನಾವಣೆ ನಂತರ ಭಾರತ ಸೇರಿದಂತೆ ಇತರೆ ನೆರೆ ರಾಷ್ಟ್ರಗಳೊಂದಿಗೆ ಪಾಕಿಸ್ತಾನದ ಸಂಬಂಧ ಉತ್ತಮಗೊಳ್ಳುತ್ತೆ ಎಂದು ಹೇಳಿಕೆ ನೀಡಿದ್ದಾರೆ. ಶಾಂತಿ ಹಾಗೂ ಪ್ರಗತಿಗಾಗಿ ಪಾಕ್ ಮೊದಲ ಹೆಜ್ಜೆ ಇಡಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಪಾಕ್ ಉತ್ತರ ಸಂಬಂಧ ಹೊಂದಿದೆ. ಶಾಂತಿಯುತ ಪಾಕಿಸ್ತಾನ ಶ್ರೀಮಂತಿಕೆಯತ್ತ ಹೆಜ್ಜೆ ಹಾಕಲಿದೆ ಎಂದರು.
ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಪರಿಷ್ಕೃತ ವೀಸಾ ನೀತಿಯನ್ನು ಘೋಷಿಸಿ ಮಾತನಾಡಿದ ಅವರು, ಇದು ಹೊಸ ಪಾಕಿಸ್ತಾನದ ಮೊದಲ ಹೆಜ್ಜೆ ಎಂದು ಬಣ್ಣಿಸಿದರು. ಎಲ್ಲಾ ಧರ್ಮಗಳ ದೇವರು ಪಾಕ್ನಲ್ಲಿ ನೆಲೆಸಿದ್ದಾರೆ ಎಂದು ಹೇಳುವ ಮೂಲಕ ಧಾರ್ಮಿಕ ಪ್ರವಾಸಕ್ಕೆ ಅವರು ಒತ್ತು ನೀಡಿದ್ದಾರೆ.
ಪುಲ್ವಾಮ ದಾಳಿ, ಆನಂತರ ಭಾರತದ ಏರ್ಸ್ಟ್ರೈಕ್ನಿಂದಾಗಿ ಪಾಕ್ ಹಾಗೂ ಭಾರತದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಉಗ್ರವಾದವನ್ನು ಧಮನ ಮಾಡುವಂತೆ ಕೇಂದ್ರ ಸರ್ಕಾರ ಪಾಕ್ ಪ್ರಧಾನಿ ಮೇಲೆ ಒತ್ತಡ ಹೇರುತ್ತಲೇ ಇದೆ. ಪಾಕ್ ಸಹ ನೆಪಗಳನ್ನು ಹೇಳುತ್ತಾ ಜಾರಿಕೊಳ್ಳುವ ಯತ್ನ ನಡೆಸುತ್ತಿದೆ. ಹೀಗಿದ್ದೂ, ಪಾಕ್ ಪ್ರಧಾನಿ ಹೊಸ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.