ಕನ್ನಡ ಚಿತ್ರರಂಗದಲ್ಲಿ ಪ್ರೇಮಕಥೆಗಳುಳ್ಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶ್ರೀನಗರ ಕಿಟ್ಟಿ ಈಗ ಗೌಳಿ ಚಿತ್ರಕ್ಕಾಗಿ ತನ್ನ ಲುಕ್ ಬದಲಾವಣೆ ಮಾಡಿಕೊಂಡಿದ್ದು, ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅದ್ಧೂರಿ ಮೇಕಿಂಗ್ ಹಾಗೂ ಟೈಟಲ್ ಟೀಸರ್ ಮೂಲಕವೇ ಹೆಚ್ಚು ಸುದ್ದಿಯಾಗಿರುವ ಗೌಳಿ ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ. ಈ ವಿಚಾರವನ್ನು ಖುಷಿಯಿಂದ ಹಂಚಿಕೊಂಡಿರುವ ನಿರ್ಮಾಪಕ ರಘು ಸಿಂಗಂ ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಶ್ರೀನಗರ ಕಿಟ್ಟಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇತರೆ ಭಾಷೆಯವರ ಗಮನ ಸೆಳೆದಿದೆ. ಎರಡು ಕೋಟಿಗೆ ಈ ಚಿತ್ರದ ಡಬ್ಬಿಂಗ್ ಹಾಗು ಸ್ಯಾಟಲೈಟ್ ರೈಟ್ಸ್ ಮಾರಾಟ ಮಾಡಲಾಗಿದೆ ಅಂತಾ ನಿರ್ಮಾಪಕ ರಘು ಸಿಂಗಂ ತಿಳಿಸಿದ್ದಾರೆ.
ಈ ಹಿಂದೆ ಬಿಡುಗಡೆಯಾದ ಮಹಾರಕ್ಕಸ ಹಾಡಿನ ಮೇಕಿಂಗ್ ಮೆಚ್ಚಿ ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್, ಪ್ರಜ್ವಲ್ ಸೇರಿದಂತೆ ಬಹುತೇಕ ಕಲಾವಿದರು ಚಿತ್ರತಂಡವನ್ನು ಅಭಿನಂದಿಸಿದ್ದರು. ಇನ್ನೂ ಗೌಳಿ ಚಿತ್ರದಲ್ಲಿ ನಾಯಕ ನಟ ಶ್ರೀನಗರ ಕಿಟ್ಟಿ ಅವರು ಈ ಹಿಂದೆಂದೂ ಕಾಣಿಸಿಕೊಂಡಿರದ ರಗಡ್ ಹಾಗೂ ಫ್ಯಾಮಿಲಿ ಮ್ಯಾನ್ ಲುಕ್ನಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ನಾಯಕಿ ಪಾವನಾ ಗೌಡ ಮೊದಲ ಬಾರಿಗೆ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಹೀಗೆ ಒಂದಷ್ಟು ಪಾತ್ರಗಳ ಲುಕ್ ಈ ಚಿತ್ರದಲ್ಲಿ ವಿಭಿನ್ನವಾಗಿದೆ.
ಇದನ್ನೂ ಓದಿ: ಟೀಕೆಗಳಿಗೆ ತಿರುಗೇಟು ಕೊಟ್ಟ ಪಠಾಣ್: 9 ದಿನಗಳಲ್ಲಿ 700 ಕೋಟಿ ರೂಪಾಯಿ ಸಂಗ್ರಹ
ಗೌಳಿ ಸಿನಿಮಾವು ನಿಜ ಘಟನೆಯಿಂದ ಪ್ರೇರಣೆಗೊಂಡ ಸಿನಿಮಾ ಎಂದು ಟೀಸರ್ನಲ್ಲಿ ಹೇಳಲಾಗಿದೆ. ಸಿನಿಮಾವು ಗೌಳಿ ಸಮುದಾಯದವರ ಕಥೆ ಇರಬಹುದೆಂಬುದು ಟೀಸರ್ ನೋಡಿದವರು ಹೇಳುತ್ತಿದ್ದಾರೆ. ಶ್ರೀನಗರ ಕಿಟ್ಟಿ ಚಿತ್ರರಂಗದಿಂದ ಕೆಲ ವರ್ಷ ವಿರಾಮ ತೆಗೆದುಕೊಂಡು, ಈಗ ಗೌಳಿ ಸಿನಿಮಾ ಮೂಲಕ ಮರಳಿದ್ದಾರೆ. 2017 ರಲ್ಲಿ ಬಿಡುಗಡೆ ಆಗಿದ್ದ ಸಿಲಿಕಾನ್ ಸಿಟಿ ಸಿನಿಮಾದ ಬಳಿಕ ಶ್ರೀನಗರ ಕಿಟ್ಟಿ ಚಿತ್ರರಂಗದಿಂದ ದೂರ ಉಳಿದಿದ್ದರು. ಆ ನಂತರ ಯಾವ ಸಿನಿಮಾದಲ್ಲಿಯೂ ನಟಿಸಿರಲಿಲ್ಲ. ಈಗ ಗೌಳಿ ಮೂಲಕ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ.
ಇದನ್ನೂ ಓದಿ: ಭಾರತೀಯ ಅದ್ಭುತ ನಟನ ಸಿನಿಮಾದಲ್ಲಿ ಅಭಿನಯಿಸುವ ಆಫರ್, ಒಲ್ಲೆ ಎಂದ ವಿನಯ್ ರಾಜ್ಕುಮಾರ್
ಶಶಾಂಕ್ ಶೇಷಗಿರಿ ಅವರ ಸಂಗೀತ ಸಂಯೋಜನೆಯ 3 ಹಾಡುಗಳು ಈ ಚಿತ್ರದಲ್ಲಿವೆ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ, ಉಮೇಶ್ ಅವರ ಸಂಕಲನ, ರಘು ಎಂ. ಅವರ ಕಲಾನಿರ್ದೇಶನ, ವಿಕ್ರಂಮೋರ್, ಅರ್ಜುನ್ ರೈ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಟೀಸರ್ನಿಂದ ಗಮನ ಸೆಳೆಯುತ್ತಿರುವ ಗೌಳಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ನಂತರ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.