'ಆರ್ಎಕ್ಸ್ 100' ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಅಜಯ್ ಭೂಪತಿ. ಇದೀಗ ಅವರು 'ಮಂಗಳವಾರಂ' ಎಂಬ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿದ್ದು, ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಚಿತ್ರತಂಡ: 'ಮಂಗಳವಾರಂ' ರಸ್ಟ್ರಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪಾಯಲ್ ರಜಪೂತ್, ಶ್ರೀತೇಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇದರ ಜೊತೆಗೆ ಚೈತನ್ಯ ಕೃಷ್ಣ, ಅಜಯ್ ಘೋಷ್, ಲಕ್ಷ್ಮಣ್ ಸೇರಿದಂತೆ ಹಲವಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
'ಮಂಗಳವಾರಂ' ಚಿತ್ರಕ್ಕೆ ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದು, ದಾಶರಥಿ ಶಿವೇಂದ್ರ ಅವರ ಛಾಯಾಗ್ರಹಣವಿರಲಿದೆ. ರಘು ಕುಲಕರ್ಣಿ ಅವರ ಕಲಾ ನಿರ್ದೇಶನವಿರಲಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಾಯಿಕುಮಾರ್ ಯಡವಲ್ಲಿ ಕಾರ್ಯನಿರ್ವಹಿಸಿದ್ದಾರೆ. 'ಕಾಂತಾರ' ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಂಗಳವಾರಂ ಎಂಬ ಸಿನಿಮಾ ಮುಖಾಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸಿನಿಮಾವನ್ನು ಸ್ವಾತಿ ಗುಣಪತಿ ಮತ್ತು ಸುರೇಶ್ ವರ್ಮಾ ಒಡೆತನದ ಮುದ್ರಾ ಮೀಡಿಯಾ ವರ್ಕ್ಸ್ ಹಾಗೂ ಅಜಯ್ ಭೂಪತಿ ಅವರ ಎ ಕ್ರಿಯೇಟಿವ್ ವರ್ಕ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಇದುವರೆಗೂ ನಿರ್ದೇಶಕರಾಗಿದ್ದ ಅಜಯ್ ಭೂಪತಿ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ನವೆಂಬರ್ 17ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: 'ಗರುಡ ಪುರಾಣ' ಚಿತ್ರದ ಟೀಸರ್ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
'ಮಂಗಳವಾರಂ' ವಿಭಿನ್ನ ಚಿತ್ರ: ಇದಕ್ಕೂ ಮುನ್ನ ನಿರ್ದೇಶಕ ಅಜಯ್ ಭೂಪತಿ ಸಿನಿಮಾ ಬಗ್ಗೆ ಮಾತನಾಡಿದ್ದರು. 'ಮಂಗಳವಾರಂ' ವಿಭಿನ್ನ ಚಿತ್ರ ಎಂದು ಬಣ್ಣಿಸಿರುವ ಅಜಯ್, 'ಭಾರತೀಯ ಚಿತ್ರರಂಗದಲ್ಲೇ ಇದುವರೆಗೂ ಯಾರೂ ಪ್ರಯತ್ನಿಸದ ಒಂದು ವಿಭಿನ್ನ ಅಂಶವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ಒಟ್ಟು 30 ಪಾತ್ರಗಳಿವೆ. ಪ್ರತಿ ಪಾತ್ರಗಳು ಮುಖ್ಯವಾಗಿದ್ದು ಎಂದು ತಿಳಿಸಿದ್ದರು.
ಪ್ರೇಕ್ಷಕರಿಗೊಂದು ಅನಿರೀಕ್ಷಿತ ಸರ್ಪ್ರೈಸ್: ಇದೊಂದು ಪಕ್ಕಾ ದಕ್ಷಿಣ ಭಾರತದ ಚಿತ್ರ ಎನ್ನುವ ನಿರ್ಮಾಪಕರಾದ ಸ್ವಾತಿ ಗುಣಪತಿ ಮತ್ತು ಸುರೇಶ್ ವರ್ಮ, 'ಆರ್ ಎಕ್ಸ್ 100 ಚಿತ್ರದಂತೆಯೇ ಈ ಚಿತ್ರದ ಮೂಲಕವೂ ಅಜಯ್ ಪ್ರೇಕ್ಷಕರಿಗೊಂದು ಅನಿರೀಕ್ಷಿತ ಸರ್ಪ್ರೈಸ್ ಕೊಡುತ್ತಾರೆ ಎಂಬ ನಂಬಿಕೆ ಇದೆ. ಕಥೆ ಅದ್ಭುತವಾಗಿ ರೂಪುಗೊಂಡಿದ್ದು, ಎಲ್ಲರಿಗೂ ಇಷ್ಟವಾಗುತ್ತದೆ. ಸದ್ಯ ಪ್ರೀ-ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದ್ದು, ಸದ್ಯದಲ್ಲೇ ಕಲಾವಿದರ ಆಯ್ಕೆ ಅಂತಿಮವಾಗಲಿದೆ' ಎಂದು ಈ ಹಿಂದೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಗೋವಾ ಮಾಫಿಯಾದ ಕಥೆಯಲ್ಲಿ ರಾಕಿಂಗ್ ಸ್ಟಾರ್.. ಯಶ್ 19 ಬಗ್ಗೆ ಸಿಕ್ತು ಬಿಗ್ ಅಪ್ಡೇಟ್