ಕನ್ನಡ ಚಿತ್ರರಂಗದ ಸಾಹಸಸಿಂಹ ವಿಷ್ಣುವರ್ಧನ್ ಅವರು ಜನಿಸಿದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಅವರ ಸ್ಮಾರಕ ನಿರ್ಮಾಣ ಆಗುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಜಿಲ್ಲೆಯ ಹೆಚ್.ಡಿ.ಕೋಟೆ ಮುಖ್ಯ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿರುವ 5 ಏಕರೆ ಜಾಗದಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಈ ಹಿಂದೆಯೇ ಆನ್ಲೈನ್ ಮೂಲಕ ಚಾಲನೆ ನೀಡಿದ್ದರು. ಇದೀಗ ಸ್ಮಾರಕದ ಕಾಮಗಾರಿ ಭರದಿಂದ ಸಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿ ಮಾಡಿದರು. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೂಗುಚ್ಛ ನೀಡುವ ಮೂಲಕ ಭಾರತಿ ವಿಷ್ಣುವರ್ಧನ್ ಸ್ಮಾರಕದ ಕೆಲಸಗಳ ಬಗ್ಗೆ ಕೆಲಹೊತ್ತು ಚರ್ಚೆ ನಡೆಸಿದರು.

ಇನ್ನು, ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಹೇಳುವ ಹಾಗೆ ಈಗಾಗಲೇ ಅಪ್ಪಾಜಿ ಅವರ ಸ್ಮಾರಕದ ಶೇ. 90 ಕೆಲಸ ಆಗಿದೆ. ಅಮ್ಮನವರ ಆಸೆಯಂತೆ ಅಪ್ಪಾಜಿ ಸ್ಮಾರಕ ನಿರ್ಮಾಣ ಆಗುತ್ತಿದೆ. ಸ್ವಲ್ಪ ಕೆಲಸಗಳು ಬಾಕಿ ಇದ್ದು, ಬಹುಶಃ ಈ ವರ್ಷಾಂತ್ಯ ಅಥವಾ ಹೊಸ ವರ್ಷಕ್ಕೆ ಅಪ್ಪಾಜಿಯವರ ಸ್ಮಾರಕ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು.
ಬರೋಬ್ಬರಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗಿದ್ದು, ಇದು ಅಭಿಮಾನಿಗಳು ಸಂತೋಷಪಡುವ ವಿಚಾರ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಸರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ನಮ್ಮ ಸರ್ಕಾರ ನಿಮ್ಮ ಜೊತೆ ಇರುತ್ತದೆ ಅಂತ ಹೇಳಿದ್ದಾರೆ ಎಂದು ಅನಿರುದ್ಧ್ ಮಾಹಿತಿ ನೀಡಿದರು.
ಇದನ್ನೂ ಓದಿ: 49ನೇ ವರ್ಷಕ್ಕೆ ಕಾಲಿಟ್ಟ ಮಾಜಿ ವಿಶ್ವಸುಂದರಿ; ಐಶ್ವರ್ಯಾ ರೈ ಬಚ್ಚನ್ಗೆ ಶುಭಾಶಯಗಳ ಸುರಿಮಳೆ