ಕನ್ನಡ ಚಿತ್ರರಂಗದಲ್ಲಿ 58ರ ಹರೆಯದಲ್ಲೂ ಹ್ಯಾಂಡ್ಸಮ್ ಆಗಿರುವ ನಟ ರಮೇಶ್ ಅರವಿಂದ್ ಅವರದ್ದು ಬಹುಮುಖ ಪ್ರತಿಭೆ. ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ ಹಾಗೂ ಮೋಟಿವೇಟರ್ ಆಗಿ ಜನತೆಯ ಅಚ್ಚುಮೆಚ್ಚಿನ ನಟರಲ್ಲೊಬ್ಬರಾಗಿದ್ದಾರೆ. ಸ್ವತಃ ಲೇಖಕರೂ ಆಗಿರುವ ರಮೇಶ್ ಕೃತಿಯೊಂದನ್ನು ಬರೆದಿದ್ದು, ಸಾವಣ್ಣ ಪ್ರಕಾಶನವು ಪ್ರಕಟಿಸಿದೆ. ಬೆಂಗಳೂರಿನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ 'ಪ್ರೀತಿಯಿಂದ ರಮೇಶ್ ಯಶಸ್ಸಿನ ಸರಳ ಸೂತ್ರಗಳು' ಪುಸ್ತಕವನ್ನು ಹಿರಿಯ ನಟ ಅನಂತ್ ನಾಗ್ ಬಿಡುಗಡೆಗೊಳಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
![Anant Nag released Ramesh Aravind new book](https://etvbharatimages.akamaized.net/etvbharat/prod-images/kn-bng-01-prithiyindha-ramesh-kruthi-luncha-madida-aanath-nag-7204735_12092022091428_1209f_1662954268_759.jpg)
ಬಳಿಕ ಮಾತನಾಡಿದ ಅನಂತ್ ನಾಗ್, ಬಾಲ್ಯದಲ್ಲಿ ನಮಗೆ 30-40 ಪುಟಗಳ ಸಣ್ಣ ಸಣ್ಣ ಕೈಪಿಡಿಗಳು ಸಿಗುತ್ತಿದ್ದವು. ಮನೆಗೆ ನೆಂಟರು ಬರುವಾಗ ವಿವೇಕಾನಂದ, ಪರಮಹಂಸರ ಕುರಿತ ಕೈಪಿಡಿಗಳನ್ನು ತರುತ್ತಿದ್ದರು. ಆ ಕೈಪಿಡಿಗಳಿಂದ ನಮಗೆ ಧಾರ್ಮಿಕ, ದೇವರ ಬಗ್ಗೆ ಮಾರ್ಗದರ್ಶನ ಸಿಗುತ್ತಿತ್ತು. ರಮೇಶ್ ಅವರ ಕೃತಿ ಕೂಡ ಹೆಚ್ಚು ಕಡಿಮೆ ಅದೇ ಮಾದರಿಯಲ್ಲಿದೆ. ನೈತಿಕತೆಯ ಬಗ್ಗೆ ಉಪಯುಕ್ತ ತಿಳುವಳಿಕೆ ನೀಡುವ ಈ ಪುಸ್ತಕ ಬರೆಯುವ ಮೂಲಕ ರಮೇಶ್ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
![Anant Nag released Ramesh Aravind new book](https://etvbharatimages.akamaized.net/etvbharat/prod-images/16346785_818_16346785_1662957796824.png)
ಬಳಿಕ ರಮೇಶ್ ಅರವಿಂದ್ ಮಾತನಾಡಿ, ಘಟನೆ, ಸನ್ನಿವೇಶಗಳನ್ನು ನೋಡಿದಾಗ ಅದನ್ನು ತನ್ನ ಹತ್ತಿರದವರೊಂದಿಗೆ ತಕ್ಷಣ ಹೇಳಿಕೊಳ್ಳಬೇಕು ಎಂದು ಅನಿಸುವುದು ಮಾನವನ ಸಹಜ ಗುಣ. ಮಾತು ಕರಗತವಾಗಿರದ ಕಾಲಘಟ್ಟದಲ್ಲಿಯೂ ಸಂಜ್ಞೆಗಳ ಮೂಲಕ ತನ್ನವರಿಗೆ ಮನುಷ್ಯ ಮಾಹಿತಿ ನೀಡುತ್ತಿದ್ದ. ಘಟನೆಯಲ್ಲಿ ತನ್ನ ಪಾತ್ರವಿರದಿದ್ದರೂ ಅದನ್ನು ವ್ಯಕ್ತಪಡಿಸುವಾಗ ತನ್ನನ್ನು ಸೇರಿಸಿಕೊಳ್ಳುತ್ತಿದ್ದ. ಇಂತಹ ಮಾನವ ಸಹಜ ಗುಣದ ಮುಂದುವರಿದ ಭಾಗವೇ ಬರವಣಿಗೆ. ನನ್ನ ಜೀವನದ ಅನುಭವಗಳನ್ನು ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿಯಲ್ಲಿ ಬರೆಯಲು ಯತ್ನಿಸಿದ್ದೇನೆ ಎಂದರು.
ಪತ್ರಕರ್ತ ಗಿರೀಶ್ರಾವ್ ಹತ್ವಾರ್ (ಜೋಗಿ) ಮಾತನಾಡಿ, ರಮೇಶ್ ಆವರಿಂದ ಒಂದಾದರೂ ಕೆಟ್ಟ ಮಾತು ಬರಬಹುದು ಎಂದು ಕಳೆದ 25 ವರ್ಷದಿಂದ ಪತ್ರಕರ್ತರಾಗಿ ನಾವು ಕಾಯುತ್ತಿದ್ದೇವೆ. ಆದರೆ ಅವರದ್ದು ಸಕಾರಾತ್ಮಕ ದೃಷ್ಟಿಕೋನ. ಸದಾ ಅಧ್ಯಯನಶೀಲ, ಹುಡುಕಾಟ, ಹೊಸತನದ ವ್ಯಕ್ತಿತ್ವ ಹೊಂದಿದ್ದಾರೆ. ಅವರ ಈ ಗುಣ ಈ ಕೃತಿಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಮೀಲ್ ಸಾವಣ್ಣ, ರಂಜನೀಕೀರ್ತಿ, ರಮೇಶ್ ಅರವಿಂದ್ ಪತ್ನಿ ಉಪಸ್ಥಿತರಿದ್ದರು.